ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ: ನ್ಯಾ. ಮಹಾಂತೇಶ್

| Published : Sep 10 2024, 01:38 AM IST

ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ: ನ್ಯಾ. ಮಹಾಂತೇಶ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅಭ್ಯುದಯ ಆಗಬೇಕಾದರೆ, ಹಳೆಯ ಬೇರು ಮತ್ತು ಹೊಸ ಬೇರು ಸೇರಿ ಒಂದು ಸೊಬಗು ಆಗಬೇಕು. ಈ ದಿಶೆಯಲ್ಲಿ ಕಿರಿಯರಾದವರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಿರಿಯರಿಗೆ ಸಂಸ್ಕಾರ ಕಲಿಸುವಂತಹ ಶಕ್ತಿ ಹಿರಿಯರಲ್ಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ ಹೇಳಿದರು.

ಜಿಲ್ಲಾಡಳಿತ, ಜಿಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 2024-25ನೇ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭ್ಯುದಯ ಆಗಬೇಕಾದರೆ, ಹಳೆಯ ಬೇರು ಮತ್ತು ಹೊಸ ಬೇರು ಸೇರಿ ಒಂದು ಸೊಬಗು ಆಗಬೇಕು. ಈ ದಿಶೆಯಲ್ಲಿ ಕಿರಿಯರಾದವರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಇಂದಿನ ದಿನಮಾನಗಳಲ್ಲಿ ತಂದೆ-ತಾಯಿ, ಹಿರಿಯರನ್ನ ಹಿಯಾಳಿಸುವಂತಹ ಪರಿಸ್ಥಿತಿ ಹುಟ್ಟಿಕೊಂಡಿದೆ. ಮನೆಯಲ್ಲಿ ಯಾರೂ ಹಿರಿಯರು ಇರಲೇಬಾರದು ಎಂಬಂತೆ ಕೆಲವರ ಮನೋಭಾವನೆ ಬೆಳೆಯುತ್ತಿದೆ. ವಿದ್ಯೆಯಿದ್ದರೂ ಇಂದಿನ ಮಕ್ಕಳಲ್ಲಿ ವಿನಯತೆ ಹೆಚ್ಚಾಗಿ ಕಾಣುತ್ತಿಲ್ಲ. ವಿದ್ಯೆಯ ಜೊತೆಜೊತೆಗೆ ವಿನಯತೆ ಅತ್ಯವಶ್ಯಕವಾಗಿದ್ದು, ಹಿರಿಯರಿಂದ ಆ ವಿನಯ ಭಾವಗಳನ್ನು ಕಲಿಯಲು ಸಾಧ್ಯವಿದೆ. ಹಿರಿಯರು ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯಕವಾಗಿದ್ದು, ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಜಿಲ್ಲೆಯ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು, ಮ್ಯೂಸಿಕಲ್ ಚೆರ್ ಹಾಗೂ ಏಕ ಪಾತ್ರಾಭಿನಯ, ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹಿರಿಯ ನಾಗರಿಕರಿಗೆ ಹಲವಾರು ಯೋಜನೆಗಳಿದ್ದು, ಅವುಗಳನ್ನು ತಲುಪಿಸಲು ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬೀರನಾಯಕರ್, ಉಪಾಧ್ಯಕ್ಷೆ ಇಂದುಮತಿ, ಗಣ್ಯರಾದ ಅಶೋಕ ಪಾಟೀಲ, ಬಸವರಾಜ ಸಜ್ಜನ, ಸುಮಂಗಲ ಹಂಚಿನಾಳ, ನಾಗಪ್ಪ ಬಳಗೇರಿ, ಜೆ.ಶರಣಪ್ಪ ಸೇರಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಹಿರಿಯ ನಾಗರಿಕರ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆದವು.