ಸಾರಾಂಶ
ತಾಲೂಕಿನ ಕರಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೆ.ಆರ್ ದೇವರಾಜು ಬಣವು ಅಭೂತಪೂರ್ವವಾಗಿ ಗೆಲುವು ಸಾಧಿಸಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕರಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೆ.ಆರ್ ದೇವರಾಜು ಬಣವು ಅಭೂತಪೂರ್ವವಾಗಿ ಗೆಲುವು ಸಾಧಿಸಿದೆ.ಈ ವೇಳೆ ಮಾತನಾಡಿದ ಕೆ.ಆರ್ ದೇವರಾಜು, ಈ ಬಾರಿಯ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿತ್ತು. ತಾಲೂಕು ಮಟ್ಟದ ರಾಜಕಾರಣಿಗಳು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ನನ್ನನ್ನು ಸೋಲಿಸಲು ಹುನ್ನಾರ ನಡೆಸಿದ್ದರು. ಆದರೆ ಈ ಭಾಗದ ರೈತರಿಗೆ ನಾನು ಮಾಡಿದ್ದ ಸೇವೆಯನ್ನು ಮನಗಂಡು ನಮ್ಮ ತಂಡದ ಮೇಲೆ ಹಾಗೂ ನನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ನನಗೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ನಾನು ರೈತ ಬಾಂಧವರಿಗೆ ಕೃತಜ್ಞನಾಗಿರುತ್ತೇನೆ. ನಮ್ಮ ಸಂಘದಿಂದ ಕಳೆದ ೨೫ವರ್ಷಗಳಿಂದಲೂ ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಉತ್ತಮ ಸೇವೆ ಮಾಡುತ್ತಾ ಬಂದಿದ್ದೇವೆ. ಇದರ ಫಲವಾಗಿ ನಮ್ಮ ಬಣ ಚುನಾವಣೆಯಲ್ಲಿ ಅತಿಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಿ ಎಂದರು.
ಕೆ.ಆರ್ ದೇವರಾಜು 295, ಉಪ್ಪಿನ ಹಳ್ಳಿ ಜಯಣ್ಣ 246, ದೊಡ್ಡ ಲಿಂಗಯ್ಯ 245, ಶಿವಮೂರ್ತಿ 243, ಶೇಷಣ್ಣ 228, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮೃತಶ್ರೀ 281, ಭಾರತಿ 248, ಪರಿಶಿಷ್ಟ ಜಾತಿ ಮೀಸಲಿನಿಂದ ಮಲ್ಲೇಶಯ್ಯ 263, ಪರಿಶಿಷ್ಟ ಪಂಗಡದಿಂದ ಕೃಷ್ಣಯ್ಯ 267, ಹಿಂದುಳಿದ ವರ್ಗದಿಂದ ಕೆ. ಬಸವರಾಜು 265, ಎನ್.ಎಸ್. ವೀರಣ್ಣ 255 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ರಂಗನಾಥ್ ಕರ್ತವ್ಯ ನಿರ್ವಹಿಸಿದರು.