ಸಾರಾಂಶ
ಶಿಗ್ಗಾಂವಿ: ರಾಜ್ಯ ಸರ್ಕಾರ ಹದಿನೈದು ದಿನದಿಂದ ವಿಧಾನಸೌಧಕ್ಕೆ ಕೀಲಿ ಹಾಕಿ ಹಣದ ಚೀಲ ತೆಗೆದುಕೊಂಡು ಬಂದು ಚುನಾವಣೆ ಮಾಡಿದ್ದಾರೆ. ಅವರಿಗೆ ಜನರು ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.ಬುಧವಾರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-೧ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.ಶಿಗ್ಗಾಂವಿ -ಸವಣೂರು ಕ್ಷೇತ್ರದಲ್ಲಿ ಆರಂಭದಿಂದಲೂ ನೂರಕ್ಕೂ ನೂರು ಸಾಮಾನ್ಯ ಮತದಾರರು ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ದಿನೇ ದಿನೇ ಹೆಚ್ಚಳವಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಭರತ್ ಬೊಮ್ಮಾಯಿ ಬಹಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸರ್ಕಾರ ವಿಧಾನಸೌಧಕ್ಕೆ ಕೀಲಿ ಹಾಕಿ ಹಣದ ಚೀಲ ಹಿಡಿದುಕೊಂಡು ಬಂದು ಚುನಾವಣೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ಕಾರಿ ಕೆಲಸಗಳನ್ನು ನಿಲ್ಲಿಸಿ ಚುನಾವಣೆ ನಡೆಸಿದ್ದಾರೆ. ಅವರು ತಮ್ಮ ರಾಜಕೀಯ ಅಧಃಪತನವನ್ನು ಈ ರೀತಿ ತೋರಿಸಿದ್ದಾರೆ ಎಂದರು.ಕಾಂಗ್ರೆಸ್ಸಿನವರು ನಮ್ಮ ಮೇಲೆ ಮಾಡಿರುವ ಆರೋಪ ಯಾವುದೂ ಸತ್ಯವಲ್ಲ. ನವೆಂಬರ್ ೨೩ಕ್ಕೆ ಅದಕ್ಕೆಲ್ಲ ಉತ್ತರ ಸಿಗುತ್ತದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ರೌಡಿ ಶೀಟರ್ ಪ್ರಕರಣ ಇನ್ನು ಖುಲಾಸೆಯಾಗಿಲ್ಲ ಎಂದು ಎಸ್ಪಿ ಅವರೇ ಹೇಳಿದ್ದರು. ಅವರೇ ಎರಡು ತಾಸಿನಲ್ಲಿ ಉಲ್ಟಾ ಹೊಡೆದರು. ಗೃಹ ಇಲಾಖೆ ಪೊಲೀಸರನ್ನು ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.ಈ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ಗೆ ಸೋಲಿನ ಭಯದಲ್ಲಿ ತುಷ್ಟೀಕರಣ ನಿರಂತರ ಮಾಡುತ್ತ ಬಂದಿದ್ದಾರೆ. ಅವರು ರಾಗ-ದ್ವೇಷ ಇಲ್ಲದೆ ಕೆಲಸ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಚುನಾವಣೆ ಗೆಲ್ಲಲು ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.