ಹೂವಿನಹಡಗಲಿ: ಅತ್ತ ಮಳೆ ಇಲ್ಲ, ಇತ್ತ ಕೊಳವೆಬಾವಿ ಮತ್ತು ನದಿ ನೀರಿನಿಂದ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ರೋಸಿ ಹೋಗಿ ರೈತರು ಗಿರಿಯಾಪುರ ಮಠ ಜೆಸ್ಕಾಂ ವಿದ್ಯುತ್‌ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿರುವ ಘಟನೆ ಸೋಮವಾರ ನಡೆದಿದೆ.ತಾಲೂಕಿನ ಮಕರಬ್ಬಿ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ ಅತ್ಯಂತ ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದೆ. ನಿತ್ಯ 20ಕ್ಕೂ ಹೆಚ್ಚು ಬಾರಿ ವಿದ್ಯುತ್‌ ಹೋಗಿ ಬರುತ್ತದೆ. ರೈತರಿಗೆ ನೀಡಬೇಕಿದ್ದ 7 ತಾಸು ವಿದ್ಯುತ್‌ ಕೇವಲ 3ರಿಂದ 4 ಮಾತ್ರ ಪೂರೈಕೆಯಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನದಿ ತೀರದ ಅಂಗೂರು, ಕೋಟಿಹಾಳ, ಮಕರಬ್ಬಿ ಗ್ರಾಮಗಳ ರಾಜಕೀಯ ಕೆಲ ಪ್ರಭಾವಿಗಳು ತಮ್ಮ ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ಕುಡಿಯುವ ನೀರಿನ ನಿರಂತರ ವಿದ್ಯುತ್ ಲೈನ್‌ಗೆ ಅಕ್ರಮ ಸಂಪರ್ಕ ಹೊಂದಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಪದೇಪದೇ ವಿದ್ಯುತ್ ಕೈ ಕೊಡುತ್ತದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಜತೆಗೆ ಕುಡಿವ ನೀರಿನ ಯೋಜನೆಗೂ ತೊಂದರೆ ಉಂಟಾಗುತ್ತಿದೆ.

ಕತ್ತೆಬೆನ್ನೂರು ಸೇರಿ 6 ಹಳ್ಳಿಗಳಿಗೆ ಕುಡಿವ ನೀರಿನ ಸಮಸ್ಯೆಯಾಗುತ್ತಿದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಕುಡಿವ ನೀರಿನ ಯೋಜನೆ ಮತ್ತು ನಿರಂತರ ವಿದ್ಯುತ್‌ ಲೈನ್‌ಗೆ ಅಕ್ರಮ ಸಂಪರ್ಕ ಪಡೆಯುತ್ತಿರುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಕರಬ್ಬಿ ಗ್ರಾಮದ ಶಾಂತಣ್ಣ, ಪರಮೇಶ್ವರಪ್ಪ, ಮಾಬುಸಾಬ್‌, ನಾಗಲಿಂಗಪ್ಪ, ಹನುಮಂತಪ್ಪ, ದ್ಯಾಮಜ್ಜ ಸೇರಿದಂತೆ ಕೋಟಿಹಾಳ್‌ ರೈತರು ಇದ್ದರು.