ಕಾಡಾನೆಗೆ ದಾಳಿಗೆ ಅರಣ್ಯರಕ್ಷಕ ಚಿಕ್ಕ ಮಾದಯ್ಯ ಬಲಿ

| Published : Jul 13 2024, 01:37 AM IST

ಸಾರಾಂಶ

ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ರಕ್ಷಕರೊಬ್ಬರು ಮೃತಪಟ್ಟ ಘಟನೆ ಬನ್ನೇರುಘಟ್ಟ ಹಕ್ಕಿಪಿಕ್ಕಿ ಕಾಲೋನಿಯ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ರಕ್ಷಕರೊಬ್ಬರು ಮೃತಪಟ್ಟ ಘಟನೆ ಬನ್ನೇರುಘಟ್ಟ ಹಕ್ಕಿಪಿಕ್ಕಿ ಕಾಲೋನಿಯ ಬಳಿ ನಡೆದಿದೆ.

ಬನ್ನೇರುಘಟ್ಟ ಮೂಲದ ಚಿಕ್ಕ ಮಾದಯ್ಯ ಕಾಡಾನೆ ದಾಳಿಗೆ ಮೃತಪಟ್ಟ ಅರಣ್ಯ ರಕ್ಷಕ. ಕಳೆದ 20 ವರ್ಷಗಳಿಂದ ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಕಾಡಾನೆ ಕಾಣಿಸಿಕೊಂಡಿದೆ. ಆನೆಯನ್ನು ಕಾಡಿಗಟ್ಟಲು ಅರಣ್ಯ ರಕ್ಷಕ ಪ್ರಯತ್ನಿಸುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ.

ಆನೆ ತುಳಿತಕ್ಕೆ ಒಳಗಾದ ಚಿಕ್ಕ ಮಾದಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬದವರ ಗೋಳು ಮುಗಿಲುಮುಟ್ಟಿದ್ದು, ಕಳೆದ ಆರು ತಿಂಗಳಲ್ಲಿ ಹಕ್ಕಿಪಿಕ್ಕಿ ಗ್ರಾಮದಲ್ಲಿ ಆರು ಜನ ಮೃತಪಟ್ಟಿದ್ದಾರೆ, ಬಡವರ ಸಾವಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅರಣ್ಯ ಇಲಾಖೆಯ ವತಿಯಿಂದ ಕುಟುಂಬಸ್ಥರಿಗೆ ₹25 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಕುಟುಂಬದ ವಾರಸುದಾರರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.