ಸಾರಾಂಶ
ಕರಾವಳಿ ಸಂಚಾರಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಹಾಗೂ ಎಸ್ಡಿಎಂ ಕಾನೂನು ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ಈಡೇರಿಕೆಗೆ ನಗರದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಹಂತದ ಇಮೇಲ್ ಅಭಿಯಾನ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಸಂಚಾರಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಹಾಗೂ ಎಸ್ಡಿಎಂ ಕಾನೂನು ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ ಬೇಡಿಕೆ ಈಡೇರಿಕೆಗೆ ನಗರದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಹಂತದ ಇಮೇಲ್ ಅಭಿಯಾನ ನಡೆಯಿತು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕರಾವಳಿ ಭಾಗದಲ್ಲಿ ಸುಮಾರು 77 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ಈ ಭಾಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅನಿವಾರ್ಯತೆಯಿದೆ. ಈ ಬೇಡಿಕೆ ಈಡೇರಬೇಕಾದರೆ ಜನಾಂದೋಲನವಾದಾಗ ನ್ಯಾಯ ಸಿಗಲು ಸಾಧ್ಯ ಎಂದರು.
ಹೈಕೋರ್ಟ್ ಸಂಚಾರಿ ಪೀಠವಾದರೆ ಕಡಿಮೆ ಖರ್ಚಿನಲ್ಲಿ ತ್ವರಿತಗತಿಯಲ್ಲಿ ನ್ಯಾಯ ಸಿಗಲು ಸಾಧ್ಯ. ಇದರ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ವರ್ಗ, ಸಮುದಾಯದ ಬೇಡಿಕೆಯಲ್ಲ. ಜನಸಮುದಾಯದ ಹೋರಾಟವಾಗಿ ತೀವ್ರತೆ ಪಡೆದುಕೊಂಡಾಗ ಮಾತ್ರ ಬೇಡಿಕೆ ಈಡೇರಲು ಸಾಧ್ಯ. ಈ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ರಚಿಸಲಾಗಿದ್ದು, ಪ್ರಾರಂಭಿಕ ಹಂತದಲ್ಲಿ ಇಮೇಲ್ ಅಭಿಯಾನ ನಡೆಯಲಿದೆ. ಇದಾದ ಬಳಿಕ ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು, ಕಾನೂನು ಸಚಿವರಿಗೆ 1 ಲಕ್ಷ ಪೋಸ್ಟ್ಕಾರ್ಡ್ ಅಭಿಯಾನ, ಮಂಗಳೂರಿನ 5 ಕಡೆಗಳಲ್ಲಿ ಸಹಿ ಅಭಿಯಾನ, ಹೆಜಮಾಡಿ ಟೋಲ್ಗೇಟ್ನಿಂದ ಮಂಗಳೂರಿಗೆ ಪಾದಯಾತ್ರೆ ಮೂಲಕ ಹೋರಾಟ ನಡೆಸಲಾಗುವುದು. ಇದಾದ ಬಳಿಕ 100 ಮಂದಿ ನಾನಾ ಕ್ಷೇತ್ರದ ಸಾಧಕರನ್ನು ಒಗ್ಗೂಡಿಸಿ ಬೆಂಗಳೂರಿಗೆ ನಿಯೋಗ ತೆರಳಿ ರಾಜ್ಯಪಾಲರು, ಹೈಕೋರ್ಟ್ ನ್ಯಾಯಾಧೀಶರಿರು, ಮುಖ್ಯಮಂತ್ರಿಗಳಿಗೆ ಹೈಕೋರ್ಟ್ ಸಂಚಾರಿ ಪೀಠದ ಅನಿವಾರ್ಯತೆ ಮನದಟ್ಟು ಮಾಡಲಾಗುವುದು. 6 ತಿಂಗಳೊಳಗೆ ಸಂಚಾರಿ ಪೀಠವನ್ನು ಪಡೆದುಕೊಳ್ಳವುದು ನಮ್ಮ ಹೋರಾಟದ ಉದ್ದೇಶವಾಗಿದೆ ಎಂದು ಹೇಳಿದರು.ಎಸ್ಡಿಎಂ ಕಾನೂನು ಕಾಲೇಜಿನ ಉಪಪ್ರಾಂಶುಪಾಲ ಬಾಳಿಕಾ ಅವರು ಇಮೇಲ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಹೈಕೋರ್ಟ್ ಸಂಚಾರಿ ಪೀಠ ಹೋರಾಟದ ಮೂಲಕ ಬೇಡಿಕೆಯನ್ನು ಈಡೇರಿಸಿಕೊಳ್ಳಲು ವಿದ್ಯಾರ್ಥಿ ಶಕ್ತಿ ಸಾಥ್ ನೀಡಬೇಕು ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಉಪಾಧ್ಯಕ್ಷೆ ಆಶಾ ನಾಯಕ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಉಪನ್ಯಾಸಕಿ ಸಾರಿಕಾ, ನಿವೃತ್ತ ಪ್ರಾಂಶುಪಾಲ ಡಾ.ದೇವರಾಜ್, ವಕೀಲರ ಸಂಘದ ಮಾಜಿ ಅಧ್ಯಕ್ಷ ನರಸಿಂಹ ಹೆಗ್ಡೆ, ಗಿರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯಾತ್ಮ ಭಟ್ ಇದ್ದರು. ಹೋರಾಟ ಸಮಿತಿಯ ವಿದ್ಯಾರ್ಥಿ ಸಂಯೋಜಕ ದಿನಕರ ಶೆಟ್ಟಿ ನಿರೂಪಿಸಿದರು.