ಮಾಚಿದೇವರ ನೇರವಂತಿಕೆಯನ್ನು ಅಳವಡಿಸಿಕೊಳ್ಳಿ: ಸಿದ್ದೇಶ್

| Published : Feb 02 2024, 01:03 AM IST

ಸಾರಾಂಶ

ಶರಣರಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಮಾಚಿದೇವರು ಉನ್ನತ ವ್ಯಕ್ತಿತ್ವದಿಂದ ಎಲ್ಲರಿಂದಲೂ ಗೌರವ ಪಡೆದಿದ್ದರು.

ಹಿರಿಯೂರು: ಶರಣರಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಮಾಚಿದೇವರು ಉನ್ನತ ವ್ಯಕ್ತಿತ್ವದಿಂದ ಎಲ್ಲರಿಂದಲೂ ಗೌರವ ಪಡೆದಿದ್ದರು ಎಂದು ಶಿರಸ್ತೇದಾರ್ ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮಾಚಿದೇವರು ವಚನಕಾರರಾಗಿ, ಶರಣರಾಗಿ ಅತ್ಯಂತ ಉತ್ತಮ ನೀತಿಯನ್ನು ಅಳವಡಿಸಿಕೊಂಡು ಬಾಳಿ ಬದುಕಿದರು. ವೀರ ಯೋಧರು ಆಗಿದ್ದ ಅವರು, ಕಲ್ಯಾಣ ಕ್ರಾಂತಿ ಸಮಯದಲ್ಲಿದ್ದ ಶರಣ ಶರಣೆಯರಲ್ಲಿ ಹಿರಿಯರೆನಿಸಿದ್ದರು. ಮಾಚಿದೇವರು ರಚಿಸಿದ ವಚನಗಳ ಸಂಖ್ಯೆ ಹೆಚ್ಚಿದ್ದು ಇದುವರೆಗೂ ಸುಮಾರು 350 ವಚನಗಳು ಮಾತ್ರ ದೊರೆತಿವೆ ಎನ್ನಲಾಗಿದೆ. ಕಂಡದ್ದನ್ನು ನೇರವಾಗಿಯೇ ಹೇಳುವ, ಖಂಡಿಸುವ ಗುಣವಿದ್ದ ಮಾಚಿದೇವರು ಶರಣರ ಅಗ್ರಗಣ್ಯ ಬಳಗದಲ್ಲಿದ್ದರು ಎಂದರು. ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಬಿ ಸಿದ್ದೇಶ್ ಮಾತನಾಡಿ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಪರ್ವತಪ್ಪ, ಸುಜ್ಞಾನಿಯವರ ಪುತ್ರರಾದ ಮಾಚಿದೇವರು ಕಾಯಕಯೋಗಿಯಾಗಿದ್ದರು. ಸರ್ವರಿಗೂ ಸಮಪಾಲು, ಸಮಬಾಳು ದೊರೆಯಲೆಂದು ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಪ್ರಮುಖರೆನಿಸಿದರು. ದಾಸೋಹ ಕಾಯಕ, ವಚನ ನಿರ್ಮಾಣ, ಸಾಮಾಜಿಕ ಪರಿವರ್ತನೆಯಂತಹ ಪ್ರಮುಖ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ನೇರವಂತಿಕೆ, ಧೈರ್ಯ ಮತ್ತು ಸೇವಾ ಮನೋಭಾವವನ್ನು ನಾವೆಲ್ಲರೂ ಬದುಕುಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಬಸವರಾಜ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎಂ.ಮನೋಹರ್, ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ರೈತ ಮುಖಂಡ ಕೆಸಿ ಹೊರಕೇರಪ್ಪ, ವೀರಭದ್ರಪ್ಪ, ಟಿ.ನಿಂಗಪ್ಪ, ರಂಗಪ್ಪ, ತಿಪ್ಪೇಸ್ವಾಮಿ, ಲೋಕೇಶ್, ಮೂರ್ತಿ, ಗೋವರ್ಧನ್, ಲಕ್ಷ್ಮೀಕಾಂತ್, ಸಿದ್ದಪ್ಪ, ಮರಿಯಪ್ಪ, ದಿವಾಕರ್, ಶಶಿಧರ್, ಶ್ರೀನಿವಾಸ್ ರೆಡ್ಡಿ ಮುಂತಾದವರು ಹಾಜರಿದ್ದರು.