ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿ: ಪ್ರೊ.ಸುರೇಶ

| Published : May 22 2025, 01:52 AM IST

ಸಾರಾಂಶ

ನಗರದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ.ಸುರೇಶ ಉದ್ಘಾಟಿಸಿ, ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಉದ್ಯೋಗದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಬಿ.ಅಯ್ಯಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ಪರ್ಧಾ ಮನೋಭಾವ ಕಡಿಮೆಯಾಗುತ್ತಿದ್ದು, ಅವಕಾಶಗಳು ಹೆಚ್ಚಿವೆ ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಮನರಂಜನೆ ಬೇಕು ಆದರೆ ಹೆಚ್ಚಿನ ಗಮನ ಭವಿಷ್ಯದ ಬಗ್ಗೆ ಇರಬೇಕು ಎಂದು ಹೇಳಿದರು. ಈ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು. ಇದೇ ಸಂದರ್ಭ ಕೊಡಗಿನ ಸಾಧಕರನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮೇಜರ್ ಬಿ.ರಾಘವ, ಯಶಸ್ಸನ್ನು ಸಾಧಿಸಲು ಶಿಸ್ತು ಮತ್ತು ಶ್ರಮವಿರಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿದವರು ಯಾವಾಗಲು ಯಶಸ್ಸನ್ನು ಗಳಿಸುತ್ತಾರೆ. ಶಿಕ್ಷಣ ಎಂಬುದು ವ್ಯಕ್ತಿ, ವ್ಯಕ್ತಿತ್ವ, ಸಮಾಜ ದೇಶವನ್ನು ಪರಿವರ್ತನೆ ಮಾಡುವ ಅಸ್ತ್ರವಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ, ದುಡಿದು ತಿನ್ನುವ ಅನ್ನ, ಭಕ್ತಿ ಪೂರ್ವಕ ಪ್ರಾರ್ಥನೆ ಮತ್ತು ಪ್ರಾಮಾಣಿಕವಾಗಿ ದುಡಿದ ಹಣ ಇವು ಒಂದಲ್ಲ ಒಂದು ದಿನ ಭವಿಷ್ಯಕ್ಕೆ ಆಧಾರ ಸ್ತಂಭಗಳಾಗುತ್ತವೆ. ಎಲ್ಲಿ ಹುಟ್ಟುತ್ತೀರಿ ಎಂಬುದು ಮುಖ್ಯ ಅಲ್ಲ, ಎಲ್ಲಿ ಮುಟ್ಟುತ್ತೀರಿ ಎಂಬುದು ಮುಖ್ಯ ಎಂದರು.

ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಜಯಂತಿ ರೈ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ, ತಂದೆ-ತಾಯಿಯರ ಕನಸಿದೆ. ಸಾಧನೆಯ ಹಾದಿಯಲ್ಲಿ ಸಾಗಿ ಸಾಧಕರಾಗಿ ನಿಲ್ಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಐಕ್ಯೂಎಕ್ಯೂ ಸಂಚಾಲಕ ಪ್ರೊ.ನಾಗರಾಜ ಕೆ.ಪಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹೇಂದ್ರ, ಅಲಿನ್ ಜೇಷ್ಮಾ, ಮೋನಿಶ್ ಎನ್‌ಸಿಸಿ ನಾಯಕ ಗುಣಶೇಖರ್, ಬಿ.ಬಿ.ಕೃತಿ, ಎನ್‌ಎಸ್‌ಎಸ್ ನಾಯಕರಾದ ಟಿ.ವಿ.ವರ್ಷ, ಎಂ.ಮನೋಜ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ. ಶ್ರೀಧರ ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ವರ್ಷ ನಿರೂಪಿಸಿದರು. ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ. ಶೈಲಶ್ರೀ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಕ್ರಿಯೇಟಿವ್ ಖಲೀಲ್, ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ ಕ್ರೀಡಾಪಟು, ಎನ್‌ಸಿಸಿ ಕೆಡೆಟ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.