ಸಿರುಗುಪ್ಪ: ಗ್ರಾಮೀಣ ಭಾಗದ ರೈತರ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿ ಹೆಚ್ಚಿಸಿ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಹೇಳಿದರು.
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನಸಹಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಕ್ಷಣ ಪಡೆದು ಸರ್ಕಾರಿ ಕೆಲಸದ ಕಡೆ ಮುಖ ಮಾಡದೇ ವ್ಯವಸಾಯದಲ್ಲಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆದು ಸ್ವಯಂ ಉದ್ಯೋಗದೊಂದಿಗೆ ಪ್ರಗತಿಯನ್ನು ಸಾಧಿಸುವಂತ ಯುವಕರು ನೀವೂ ಆಗಬೇಕು. ಸಹಕಾರಿ ಬ್ಯಾಂಕುಗಳು ಸ್ವಂತ ಬಂಡವಾಳದಲ್ಲಿ ಹಣ ವಿನಿಮಯಗೊಳಿಸಿ ವ್ಯವಹಾರ ನಡೆಸಿದಾಗ ಪ್ರತಿಯೊಂದು ಸಹಕಾರಿ ಬ್ಯಾಂಕುಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ರೈತರು, ಗ್ರಾಹಕರ ಸಹಕಾರದಿಂದ ಈ ಆರ್ಥಿಕ ವರ್ಷದಲ್ಲಿ ₹2.40 ಕೋಟಿ ಲಾಭಾಂಶ ಹೊಂದಿದೆ ಎಂದರು.2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯ 120 ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನಸಹಾಯ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ವಯೋ ನಿವೃತ್ತ ಹೊಂದಿದ ತೆಕ್ಕಲಕೋಟೆ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮರೇಗೌಡ ಹಾಗೂ ವಿ.ಎನ್.ಎಸ್. ಕಾರ್ಯದರ್ಶಿ ಮಹಾಬಲೇಶ್ವರ ಅವರನ್ನು ಸನ್ಮಾನಿಸಿದರು.
ಹರಗಿನಡೋಣಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ವೀರಭದ್ರಯ್ಯ ಸ್ವಾಮಿ, ಸಹಾಯಕ ಉಪನಿಬಂಧಕ ಜ್ಞಾನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ಮಾತನಾಡಿದರು.
ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಚಂದ್ರ ರೆಡ್ಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಂಚರಯ್ಯ, ಬ್ಯಾಂಕ್ ವ್ಯವಸ್ಥಾಪಕ ತಿಪ್ಪಣ್ಣ ಎಸ್.ಬನಸೋಡಿ, ಸಾಹಿತಿ ಡಾ.ಪಿ.ದಿವಾಕರ ನಾರಾಯಣ, ಬ್ಯಾಂಕ್ ನಿರ್ದೇಶಕರು, ಸಿಬ್ಬಂದಿ ಇದ್ದರು.ಸಿರುಗುಪ್ಪ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.