ಮುಂಡರಗಿ: ಮಹಿಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ ತನ್ನ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಸಾಧಕಿಯರ ಜೀವನದ ಹೆಜ್ಜೆಗಳ ಕುರಿತು ಅರಿತಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕಿ ಅರುಣಾ ಗುಜ್ಜರಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿನಿಲಯಗಳ ಆಶ್ರಯದಲ್ಲಿ ಭಾನುವಾರ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲಿಕರಣ- ಒಂದು ಚಿಂತನೆ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆ ಪುರುಷನಿಗೆ ಸರಿಸಮಾನವಾಗಿ ಬೆಳೆಯುತ್ತಿದ್ದಾಳೆ. ಅವಳ ಹಿಂದೆ ತಂದೆ, ಅಣ್ಣ, ಪತಿ, ಸಹೋದರನಾಗಿ, ಬೆನ್ನೆಲುಬಾಗಿ ಪುರುಷ ನಿಂತಾಗ ಮಾತ್ರ ಮಹಿಳೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಸವಿತಾ ಸಾಸ್ವಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ದಿನವನ್ನು ವಿಶೇಷವಾಗಿ ವಸತಿನಿಲಯದಲ್ಲಿ ಆಯೋಜನೆ ಮಾಡಿದ ಕಸಾಪ ಘಟಕಕ್ಕೆ ಧನ್ಯವಾದ ಸಲ್ಲಿಸುವೆ. ವಸತಿನಿಲಯದ ವಿದ್ಯಾರ್ಥಿನಿಯರಿಗೆ ಸರ್ಕಾರ ಎಲ್ಲ ಸವಲತ್ತುಗಳು ಸಿಗುತ್ತವೆ. ಅದರ ಪ್ರಯೋಜನ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಪ್ರತಿಯೊಂದು ರಂಗದಲ್ಲಿ ಬೆಳೆಯುತ್ತಿದ್ದಾರೆ. ನಿರಂತರ ಪ್ರಯತ್ನ, ಓದು ಇದಕ್ಕೆ ಕಾರಣವಾಗಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ ಹೀಗೆ ಅನೇಕ ಹುದ್ದೆಗಳನ್ನು ಅಲಂಕರಿಸಿ ಮಹತ್ತರವಾದ ಸಾಧನೆ ಮಾಡುತ್ತಿದ್ದಾರೆ ಎಂದರು.ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಮೇಶಗೌಡ ಪಾಟೀಲ, ಕಾವೇರಿ ಭೋಲಾ, ಮಂಜುನಾಥ ಮುಧೋಳ, ವಸತಿನಿಲಯದ ಸಿಬ್ಬಂದಿ ಮಮತಾಜ್ ಬಿಸನಳ್ಳಿ, ನಾಗಮ್ಮ ಹಳ್ಳಕಾರ, ರತ್ನಮ್ಮ ನಾಗರಹಳ್ಳಿ, ಇಮಾಂಬಿ ಬಾಗಮಾರ್, ಮೈಮುನ್ನಾ ಬುಕುಟಗಾರ ಉಪಸ್ಥಿತರಿದ್ದರು. ರತ್ನಾ ಕಾಗನೂರಮಠ ನಿರೂಪಿಸಿದರು. ಆರ್.ವೈ. ಪಾಟೀಲ ವಂದಿಸಿದರು.