ಸಾರಾಂಶ
ಮಾಗಡಿ: ಗ್ರಾಮೀಣ ಕ್ರೀಡೆ ಕಬಡ್ಡಿ ಆಟಗಾರರಿಗೆ ಹೆಚ್ಚಿನ ತರಬೇತಿ ಸಿಕ್ಕರೆ ತಾಲೂಕಿನಲ್ಲಿ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬಹುದು ಎಂದು ಜೆಡಿಎಸ್ ಹಿರಿಯ ಮುಖಂಡ ದಾವಣಗೆರೆ ಚಂದ್ರು ಹೇಳಿದರು.
ತಾಲೂಕಿನ ವ್ಯಾಸರಾಯನ ಪಾಳ್ಯದಲ್ಲಿ ಶ್ರೀ ವಿನಾಯಕ ಯುವಕರ ಕಲಾ ಹಾಗೂ ಕ್ರೀಡಾ ಸಂಘದ 32ನೇ ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಬಡ್ಡಿ ಆಟಗಾರರು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರು. ಮಾಜಿ ಸಚಿವ ಎಚ್.ಎಂ.ರೇವಣ್ಣನವರು ಕಬಡ್ಡಿ ಮೂಲಕವೇ ಹೆಸರು ಗಳಿಸಿದರು. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ವಿಶೇಷ ತರಬೇತಿಗಳನ್ನು ಕೊಟ್ಟಾಗ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಾಧ್ಯ. ಕ್ರಿಕೆಟ್ ಆಟಕ್ಕೆ ನೀಡುವ ಮಹತ್ವವನ್ನು ಉಳಿದ ಕ್ರೀಡೆಗಳಿಗೆ ಹೆಚ್ಚಾಗಿ ಕೊಡುತ್ತಿಲ್ಲ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಮುಖ್ಯ ಇಂತಹ ಪಂದ್ಯಾವಳಿಗಳು ಹೆಚ್ಚಾಗಿ ನಡೆದಾಗ ಸ್ಥಳೀಯ ಕ್ರೀಡಾಪಟುಗಳನ್ನು ಗುರುತಿಸಲು ಸಾಧ್ಯ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ ಮಾತನಾಡಿ, ಗಣೇಶೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದು ಪಂದ್ಯಾವಳಿಯಲ್ಲಿ ಗೆಲುವು ಸೋಲು ಸಹಜ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಮುಖ್ಯ. ತಾಲೂಕಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ನಡೆಯುವ ಮೂಲಕ ಪ್ರೋತ್ಸಾಹ ಸಿಗಲಿ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ರಾಮನಗರ ತಂಡ ಪ್ರಥಮ ಸ್ಥಾನ ಪಡೆದಿದ್ದು, ಪ್ರಥಮ ಬಹುಮಾನವಾಗಿ ಟಗರು ಮತ್ತು ಟ್ರೋಫಿ ನೀಡಲಾಯಿತು. ರನ್ನರ್ ಆಗಿ ಪಿ.ಸಿ.ಪಾಳ್ಯದ ತಂಡಕ್ಕೆ 7501 ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.ಇದೇ ವೇಳೆ ವ್ಯಾಸರಾಯನಪಳ್ಯದ ಗ್ರಾಮಸ್ಥರು ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ತಾಲೂಕಿನ ವ್ಯಾಸರಾಯನಪಾಳ್ಯ ಗ್ರಾಮದಲ್ಲಿ ಶ್ರೀ ವಿನಾಯಕ ಯುವಕರ ಕಲಾ ಹಾಗೂ ಕ್ರೀಡಾ ಸಂಘದ ವತಿಯಿಂದ 32ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಜೆಡಿಎಸ್ ಹಿರಿಯ ಮುಖಂಡ ದಾವಣಗೆರೆ ಚಂದ್ರು ಚಾಲನೆ ನೀಡಿದರು.