ಸಾರಾಂಶ
ಯುವ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರೆ ಜಾನಪದ ಕಲೆಗಳನ್ನು ಉಳಿಸಿ ಬೆಳಸಬಹುದಾಗಿದೆ.
ಹುಬ್ಬಳ್ಳಿ:
ಜಾನಪದ ಕಲೆ ಉಳಿಸಿ ಬೆಳೆಸಬೇಕಾದರೆ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.ಅವರು ಹಳೇ ಹುಬ್ಬಳ್ಳಿಯ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ (ಜನಪದ ಪರಂಪರಾ ಉತ್ಸವ- 2024) ರಾಜ್ಯಮಟ್ಟದ ಏಕವ್ಯಕ್ತಿ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ದೂರದರ್ಶನ ಕಲಾವಿದರಾದ ವಿದುಷಿ ಶಶಿಕಲಾ ದಾನಿ-ಜಲ ತರಂಗ ವಾದನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ- ಶಹನಾಯಿ ವಾದನ, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಡಾ. ಸಹನಾ ಭಟ್-ಭರತನಾಟ್ಯ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಭಯ್ಯ ಹಿರೇಮಠ-ಜಾನಪದ ಗೀತೆ, ಅಂತಾರಾಷ್ಟ್ರೀಯ ಜನಪದ ನೃತ್ಯ ಕಲಾವಿದ ಅಮಿತಕುಮಾರ ಶಿಂಧೆ -ಜಾನಪದ ನೃತ್ಯ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಮಲ್ಲಾಪುರ-ತೈಲ ವರ್ಣ ಚಿತ್ರಕಲೆ, ಪಂ. ಮನುಕುಮಾರ ಹಿರೇಮಠ-ತಬಲಾ ವಾದನ, ಶಂಕರ ಕಬಾಡಿ-ಪಿಟಿಲು ವಾದನ, ಲಕ್ಷ್ಮೀಬಾಯಿ ಹರಿಜನ-ಗೀಗೀ ಪದ ಹಾಗೂ ಅರ್ಜುನ ಮಾದರ ಅವರಿಂದ ಹಲಗೆ ವಾದನ ಪ್ರದರ್ಶನ ನಡೆಯಿತು. ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಚೆನ್ನಯ್ಯ ವಸ್ತ್ರದ ಸ್ವಾಗತಿಸಿದರು. ಮನೀಶ ಹಿಂದೆ ವಂದಿಸಿದರು. ಡಾ. ಪ್ರಕಾಶ ಮಲ್ಲಿಗೆವಾಡ ಅಧ್ಯಕ್ಷತೆ ವಹಿಸಿದ್ದರು.