ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಇಲ್ಲಿನ ಸಮೀಪದ ಲಿಂಗಪಟ್ಟಣ ಗ್ರಾಪಂ ವ್ಯಾಪ್ತಿಯ ಜೂಗನಹಳ್ಳಿಯಲ್ಲಿ ಒತ್ತುವರಿ ಮಾಡಲಾಗಿದ್ದ ನಕಾಶೆ ದಾರಿ ಅಥವಾ ಹದ್ದಿಗಿಡದ ಓಣಿಯನ್ನು ಬುಧವಾರ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.ಕಂದಾಯ ಇಲಾಖೆಯ ಆರ್.ಐ.ಮಧುಸೂದನ್ ಮಾತನಾಡಿ, ವಡ್ಡರದೊಡ್ಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಜೂಗನಹಳ್ಳಿಯ ಸರ್ವೇ ನಂ. 19, 14,15 ರಲ್ಲಿ ರಸ್ತೆ ಒತ್ತುವರಿಯಾಗಿರುವ ಬಗ್ಗೆ ವಡ್ಡರದೊಡ್ಡಿ ಗ್ರಾಮದ ತಿಮ್ಮಯ್ಯ ಬಿನ್ ಲೇ.ದುಂಡಯ್ಯ ಅವರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದರು.ಕೆಲವರು ಈ ನಕಾಶೆ ದಾರಿ ಮೇಲೆ ಒತ್ತುವರಿ ಮಾಡಿಕೊಂಡಿದ್ದರಿಂದ ಜಮೀನು ಮಾಲೀಕರು ತಮ್ಮ ಕೃಷಿ ಚಟುವಟಿಕೆಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದರು. ಮನವಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಆದೇಶದಂತೆ ಭೂ ಮಾಪನ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಅಳತೆ ಕಾರ್ಯವನ್ನೂ ಕೈಗೊಂಡಿತು.
ಭೂ ಮಾಪನ ವರದಿಯಲ್ಲಿ ನಿಖರವಾಗಿ ನಕಾಶೆ ದಾರಿ ಒತ್ತುವರಿ ಆಗಿರುವುದನ್ನು ದೃಢಪಡಿಸಲಾಗಿದೆ. ತಹಸೀಲ್ದಾರ್ ಕಚೇರಿಯ ನಿರ್ದೇಶನದಂತೆ ನಕಾಶೆ ದಾರಿಯನ್ನು ಬುಧವಾರ ಸ್ಥಳಕ್ಕೆ ಬಂದ ಅಧಿಕಾರಿಗಳು ಎರಡು ಜೆಸಿಬಿ ಮುಖಾಂತರ ತೆರವುಗೊಳಿಸಲಾಯಿತು.ಈ ವೇಳೆ ಬಿಎಸ್ಪಿ ಮಹಿಳಾ ಮುಖಂಡರು ಸುಶೀಲಮ್ಮ, ಜಯಣ್ಣ, ಮಲ್ಲೇಗೌಡ, ರಮೇಶ್, ಕುಮಾರ್, ಕಾಂತರಾಜು, ಕಬ್ಬಾಳೇಗೌಡ, ಕೃಷ್ಣ ಹಾಗೂ ಆರ್ಐ ಮಧುಸೂದನ್, ಗ್ರಾಮ ಆಡಳಿತಾಧಿಕಾರಿ ಸೋಮಶೇಖರ್, ಮತ್ತು ನರಸಪ್ಪ, ತಾಲೂಕು ಭೂಮಾಪಕರಾದ ಬೀರೇಶ್, ಪೋಲಿಸ್ ಇಲಾಖೆಯ ಎಎಸ್ ಐ ಶಿವಣ್ಣ ಮತ್ತು ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಸಮಯಕ್ಕೆ ಬಾರದ ಬಸ್ಗಳು ಪ್ರಯಾಣಿಕರು ಗಂಟಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣಶ್ರೀರಂಗಪಟ್ಟಣ:
ತಾಲೂಕಿನ ಪಂಪ್ಹೌಸ್ ವೃತ್ತದ ಬಳಿ ಸರಿಯಾದ ಸಮಯಕ್ಕೆ ಬಸ್ಗಳು ಬಾರದ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿತ್ಯ ರಸ್ತೆಯಲ್ಲೇ ಗಂಟೆಗಟ್ಟಲೆ ಕಾಯ್ದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.ಶ್ರೀರಂಗಟಪ್ಟಣ- ಕೆಆರ್ಎಸ್ ಹಾಗೂ ಮೈಸೂರು- ಕೆಆರ್ಎಸ್ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪಂಪ್ಹೌಸ್ ವೃತ್ತದಲ್ಲಿ ಬಸ್ಗಾಗಿ ನಿತ್ಯ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಇಲ್ಲಿ ಯಾವುದೇ ಬಸ್ ತಂಗುದಾಣ ಇಲ್ಲದ ಕಾರಣ ಪ್ರಯಾಣಿಕರು ಉರಿ ಬಿಸಿಲಲ್ಲೇ ತಮ್ಮ ತಲೆ ಮೇಲೆ ಬಟ್ಟೆ ಹಾಕಿಕೊಂಡು ಕಾಯ್ದು ಕೆಎಸ್ಆರ್ಟಿಸಿ, ಮೈಸೂರು ನಗರ ಸಾರಿಗೆ ಅಧಿಕಾರಿಗಳಿಗೆ ಇಡೀ ಶಾಪ ಹಾಕಿ ನಿಲ್ಲುವಂತಾಗಿದೆ.ಪಂಪ್ಹೌಸ್ ಸುತ್ತಮುತ್ತಲ ಗ್ರಾಮಸ್ಥರಿಗೆ ಇದು ಕೇಂದ್ರ ಸ್ಥಳ. ತಮ್ಮ ಕಚೇರಿ ಕೆಲಸ ಸೇರಿದಂತೆ ತಮ್ಮ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಮೈಸೂರು, ಕೆಆರ್ಎಸ್ ಹಾಗೂ ಶ್ರೀರಂಗಪಟ್ಟಣಕ್ಕೆ ತೆರಳಲು ನೂರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ.
ಬಸ್ಗಾಗಿ ಕಾಯ್ದು ಕುಳಿತುಕೊಳ್ಳಲು ಇಲ್ಲಿ ಯಾವುದೇ ಬಸ್ ತಂಗುದಾಣ ಸಹ ಇಲ್ಲದೆ ಜೊತೆಗೆ ಸರಿಯಾದ ಸಮಯಕ್ಕೆ ಬಸ್ಗಳು ಬಾರದೆ ಉರಿಬಿಸಿಲಿನಲ್ಲೆ ರಸ್ತೆಯಲ್ಲೇ ಬಸ್ಗಾಗಿ ಕಾಯ್ದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.