ಸಾರಾಂಶ
ಸಿದ್ದರಾಮಯ್ಯ ಅವರು ಮೈಲಾರಿ ಹೋಟೆಲ್ ನಲ್ಲಿ ದೋಸೆ, ಇಡ್ಲಿ ಸವಿದರು. ಈ ವೇಳೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಅವರು ಸಹ ದೋಸೆ, ಇಡ್ಲಿ ತಿಂದು ಮುಖ್ಯಮಂತ್ರಿಗೆ ಸಾಥ್ ನೀಡಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ನಜರ್ ಬಾದ್ ನ ಮೈಲಾರಿ ಹೊಟೇಲ್ ನಲ್ಲಿ ಶುಕ್ರವಾರ ಬೆಣ್ಣೆ ದೋಸೆ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶನಿವಾರ ಬೆಳಗ್ಗೆ ಮೈಸೂರಿನ ಅಗ್ರಹಾರದ ಮೈಲಾರಿ ಹೋಟೆಲ್ ಗೆ ತೆರಳಿ ಬೆಳಗಿನ ತಿಂಡಿ ಸವಿದರು.ಸಿದ್ದರಾಮಯ್ಯ ಅವರು ಮೈಲಾರಿ ಹೋಟೆಲ್ ನಲ್ಲಿ ದೋಸೆ, ಇಡ್ಲಿ ಸವಿದರು. ಈ ವೇಳೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಅವರು ಸಹ ದೋಸೆ, ಇಡ್ಲಿ ತಿಂದು ಮುಖ್ಯಮಂತ್ರಿಗೆ ಸಾಥ್ ನೀಡಿದರು.
ತಿಂಡಿ ತಿಂದು ಮನೆಗೆ ಬಂದು ಮನವಿ ಸ್ವೀಕಾರಅಗ್ರಹಾರ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ಸವಿದ ಬಳಿಕ ಮತ್ತೆ ತಮ್ಮ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು, ತಮಗಾಗಿ ಕಾದುನಿಂತಿದ್ದ ಸಾರ್ವಜನಿಕರ ಬಳಿಗೆ ತೆರಳಿ ಅವರ ಮನವಿಗಳನ್ನು ಸ್ವೀಕರಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಉಳಿದವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಇದೇ ವೇಳೆ ಕೆಲವು ನಾಯಕರ ಬೆಂಬಲಿಗರಿಂದ ಸಿದ್ದರಾಮಯ್ಯ ಭೇಟಿಯಾಗಿ, ತಮ್ಮ ನೆಚ್ಚಿನ ನಾಯಕರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.ಎಂಎಲ್ಸಿ ಮಾಡುವಂತೆ ದುಂಬಾಲು- ಸಿಎಂ ತಪರಾಕಿ
ತಮ್ಮ ನಾಯಕನನ್ನು ಎಂಎಲ್ಸಿ ಮಾಡುವಂತೆ ದುಂಬಾಲು ಬಿದ್ದ ಅವರ ಬೆಂಬಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಪರಾಕಿ ಹಾಕಿದ ಪ್ರಸಂಗ ಸಹ ಜರುಗಿತು.ಎಷ್ಟು ಜನಕ್ಕೆ ಅಂತಕೊಡೋದು ಹೇಳ್ರಯ್ಯಾ? ನಮ್ಮ ಕಷ್ಟ ನಮಗಾಗಿದೆ. ಎಸ್ಸಿಗೆ ಕೊಡಬೇಕು, ಎಸ್ಟಿಗೆ, ಓರ್ವ ಮಹಿಳೆಗೂ ಕೊಡಬೇಕು. ನಮ್ಮ ಕಷ್ಟ ನಿಮಗೆ ಅರ್ಥ ಆಗೋದಿಲ್ಲ ಎಂದು ಸಿದ್ದರಾಮಯ್ಯ ಅವರು ಕಷ್ಟ ಹೇಳಿಕೊಳ್ಳಲು ಬಂದವರ ಬಳಿಯೇ ಕಷ್ಟ ತೋಡಿಕೊಂಡರು.