ಸಾರಾಂಶ
ದಾವಣಗೆರೆ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇತ್ತು ಅಂದವರಿಗೆ, ಶ್ರೀರಾಮನ ಜನ್ಮಪತ್ರ ಕೇಳಿದವರಿಗೆ, ಕರ ಸೇವಕರ ಮೇಲೆ ಕೇಸ್ ದಾಖಲಿಸಿದ ಕಾಂಗ್ರೆಸ್ಸಿಗರಿಗೆ ಈಗ ಜ್ಞಾನೋದಯವಾಗಿದ್ದು, ಇದೀಗ ತಮ್ಮ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ಸಿಗರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯು ತೀವ್ರವಾಗಿ ಕಾಡುತ್ತಿದ್ದು, ಅಯೋಧ್ಯೆಯಲ್ಲೇ ಬಾಬರಿ ಮಸೀದಿ ಇತ್ತು ಅಂದವರಿಗೆಲ್ಲಾ ಈಗ ಜ್ಞಾನೋದಯವೂ ಆಗಿದೆ ಎಂದರು.
ಬಾಬರಿ ಮಸೀದಿಯು ದೇಶಕ್ಕೆ ಕಳಂಕ. ಅದನ್ನು ತೆಗೆಯಲು ದೇಶದ ಮೂಲೆ ಮೂಲೆಯಿಂದಲೂ ಲಕ್ಷಾಂತರ ಕರ ಸೇವಕರು ಪಾದಯಾತ್ರೆ ಮಾಡಿದ್ದರು. ಕರ ಸೇವಕರ ಮೇಲೆ ಗುಂಡು ಹಾರಿಸಿದ್ದೇ ಕಾಂಗ್ರೆಸ್. ಆದರೆ, ಈಗ ಅದೇ ಕಾಂಗ್ರೆಸ್ಗೆ ತಡವಾಗಿ ಅರಿವು ಮೂಡಿದೆ.
ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ಆದರೆ, ಅವರ್ಯಾರೂ ಬರುತ್ತಿಲ್ಲ. ಉದ್ಘಾಟನೆ ನಂತರ ಭೇಟಿ ನೀಡುವುದಾಗಿ ಹೇಳುತ್ತಿದ್ದಾರೆ. ಹಿಂಬಾಗಿಲ ರಾಜಕಾರಣ ಮಾಡಬೇಡಿ. ರಾಮನ ಬಗ್ಗೆ ಮಾತನಾಡಿದರೆ, ಅಯೋಧ್ಯೆಗೆ ಹೋಗುವುದಾಗಿ ಹೇಳಿದರೆ ಎಲ್ಲಿ ಅಲ್ಪಸಂಖ್ಯಾತರ ಮತಗಳು ಕೈ ತಪ್ಪುತ್ತವೋ ಎಂಬ ಭೀತಿಯಲ್ಲಿ ಕಾಂಗ್ರೆಸ್ ಪಕ್ಷವಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ಹಿರಿಯ ಮುಖಂಡರಾದ ಡಾ.ಟಿ.ಜಿ.ರವಿಕುಮಾರ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಶಿವಪ್ರಕಾಶ, ರಾಜು ವೀರಣ್ಣ, ಶಿವನಗೌಡ ಟಿ.ಪಾಟೀಲ್, ಪ್ರವೀಣ ಜಾಧವ್, ದಯಾನಂದ, ಜಯರುದ್ರೇಶ, ಮೋಹನ, ಅಣಜಿ ಬಸವರಾಜ ಇತರರು ಇದ್ದರು.
ಯುವನಿಧಿ ಯೋಜನೆ ಬೋಗಸ್: ಶಿವಮೊಗ್ಗದಲ್ಲಿ ನಿನ್ನೆ ಉದ್ಘಾಟನೆಯಾದ ಯುವನಿಧಿ ಕಾರ್ಯಕ್ರಮವೇ ಬೋಗಸ್ ಆಗಿದ್ದು, ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿ, ಮಾನದಂಡಗಳನ್ನೆಲ್ಲಾ ಧಿಕ್ಕರಿಸಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.
ಯುವನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ ನೆರೆಯ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನೆಲ್ಲಾ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ ಎಂದರು.
ಬಸ್ಗಳನ್ನು ವಿಂಗಡಣೆ ಮಾಡಿ, ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ, ಒತ್ತಾಯ ಪೂರ್ವಕವಾಗಿ ಯುವನಿಧಿ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಊಟ, ಉಪಹಾರವೂ ಇಲ್ಲದಂತೆ ಬಿಸಿಲಿನಲ್ಲಿ ಕೂಡುವಂತೆ ಮಾಡಿದ್ದಾರೆ.
ಯುವನಿಧಿ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳು ಜೈ ಶ್ರೀರಾಮ ಎಂದು ಜಪ ಮಾಡಿ, ಮೋದಿಗೆ ಜಯಕಾರ ಹಾಕಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡಿದ್ದಾರೆ. ಗ್ಯಾರಂಟಿಗಳ ಉಸ್ತುವಾರಿಗೆ 16 ಕೋಟಿ ರು. ಖರ್ಚು ಮಾಡಿದ್ದಾರೆಂದರೆ ಅದ್ಯಾವ ಪರಿ ಆಡಳಿತ ಇದೆಯೆಂಬುದನ್ನು ಯಾರಾದರೂ ಗ್ರಹಿಸಬಹುದು ಎಂದು ಟೀಕಿಸಿದರು.
ಸರ್ವರ ಅಭಿಪ್ರಾಯ, ನಂತರವೇ ಜಿಲ್ಲಾಧ್ಯಕ್ಷರ ಆಯ್ಕೆ: ದಾವಣಗೆರೆ ಸೇರಿದಂತೆ ಎಲ್ಲಾ ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಪಕ್ಷದ ವರಿಷ್ಟರು, ರಾಜ್ಯಾಧ್ಯಕ್ಷರು ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ತೀರ್ಮಾನಿಸಲಿದ್ದು, ನನ್ನ ಅಭಿಪ್ರಾಯವನ್ನೂ ರಾಜ್ಯ ನಾಯಕರಿಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಪಕ್ಷಕ್ಕೆ ದುಡಿದವರೇ ಇದ್ದು, ಜಿಲ್ಲೆಯಲ್ಲಿ ಯಾವುದೇ ಗುಂಪುಗಾರಿಕೆಯಾಗಲೀ, ಗುಂಪುಗಳಾಗಲೀ ಇಲ್ಲ. ಇರುವುದೊಂದೇ ಗುಂಪು. ಅದು ಬಿಜೆಪಿ ಗುಂಪು ಎಂದರು.
ಪಾರದರ್ಶಕವಾಗಿ ಸಮೀಕ್ಷೆಯನ್ನು ಕೈಗೊಳ್ಳಬೇಕು, ಸಮೀಕ್ಷೆಯಲ್ಲಿ ಯಾರ ಹೆಸರು ಬರುತ್ತದೋ ಅಂತಹವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವುದು ಉತ್ತಮ. ಇದೇ ವಿಚಾರವನ್ನು ರಾಜ್ಯಾಧ್ಯಕ್ಷರು, ರಾಜ್ಯ ನಾಯಕರಿಗೂ ವಿವರಿಸಿದ್ದೇನೆ.
ಜಿಲ್ಲಾಧ್ಯಕ್ಷರಾಗಿ ಸೂಕ್ತ, ಸಮರ್ಥರನ್ನು ಆಯ್ಕೆ ಮಾಡಬೇಕೆಂಬುದು ನಮ್ಮ ಅಭಿಪ್ರಾಯ ಎಂದು ಅವರು ಹೇಳಿದರು. ಸಂಘರ್ಷದಿಂದ ಯಾವುದೇ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಸಂಘಟನೆಯಿಂದ ಸಾಮರಸ್ಯವಿದೆ. ಸಂಘರ್ಷ ಬೇಕು. ಆದರೆ, ಎಲ್ಲಾ ಸಮಯದಲ್ಲೂ ಸಂಘರ್ಷವೇ ಅಂತಿಮವಲ್ಲ.
ಪಕ್ಷ ಕಟ್ಟುವ ಉದ್ದೇಶದಿಂದ ಸಾಮರಸ್ಯ ಬೇಕಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಸೇರಿದಂತೆ ಎಲ್ಲಾ 28 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ ಎಂದು ರೇಣುಕಾಚಾರ್ಯ ತಿಳಿಸಿದರು.