ಸಾರ್ವಜನಿಕ ಸೇವೆಯಲ್ಲಿ ವಿಳಂಬವಾಗದಂತೆ ನಿಗಾ ವಹಿಸಿ: ಡಿಸಿ

| Published : May 17 2024, 12:35 AM IST

ಸಾರ್ವಜನಿಕ ಸೇವೆಯಲ್ಲಿ ವಿಳಂಬವಾಗದಂತೆ ನಿಗಾ ವಹಿಸಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದ ನಗರಸಭೆ ಕಚೇರಿಗೆ ಅನಿರೀಕ್ಷಿತವಾಗಿ ಗುರುವಾರ ಭೇಟಿ ನೀಡಿದ ಡಿಸಿ, ಸಾರ್ವಜನಿಕರಿಂದ ಇದುವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು, ವಿಲೇವಾರಿಯಾಗಿರುವ ಅರ್ಜಿಗಳು ಮತ್ತು ಬಾಕಿ ಇರುವ ಅರ್ಜಿಗಳ ಕುರಿತಂತೆ ಪರಿಶೀಲನೆ ನಡೆಸಿದರು.

ಕಾರವಾರ: ನಗರಸಭೆಯಿಂದ ಸಾರ್ವಜನಿಕರಿಗೆ ಒದಗಿಸುವ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ತ್ವರಿತಗತಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಿ, ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ನಗರಸಭೆ ಕಚೇರಿಗೆ ಅನಿರೀಕ್ಷಿತವಾಗಿ ಗುರುವಾರ ಭೇಟಿ ನೀಡಿ, ಸಾರ್ವಜನಿಕರಿಂದ ಇದುವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳು, ವಿಲೇವಾರಿಯಾಗಿರುವ ಅರ್ಜಿಗಳು ಮತ್ತು ಬಾಕಿ ಇರುವ ಅರ್ಜಿಗಳ ಕುರಿತಂತೆ ಪರಿಶೀಲನೆ ನಡೆಸಿದರು. ನಿಗದಿತ ಅವಧಿಗಿಂತ ಹೆಚ್ಚುಕಾಲ ಬಾಕಿ ಇಟ್ಟುಕೊಂಡಿರುವ ಅರ್ಜಿಗಳ ಕುರಿತಂತೆ ಪರಿಶೀಲಿಸಿ ಅವುಗಳನ್ನು ತಕ್ಷಣದಲ್ಲಿ ವಿಲೇವಾರಿ ಮಾಡಬೇಕು. ಲೋಕಸಭಾ ಚುನಾವಣಾ ಕಾರ್ಯಗಳು ಮತ್ತು ನೀತಿ ಸಂಹಿತೆಯ ಕಾರಣ ಹೇಳಿಕೊಂಡು ಸಾರ್ವಜನಿಕರಿಗೆ ಒದಗಿಸುವ ಸೇವೆಗಳಲ್ಲಿ ಅನಗತ್ಯ ವಿಳಂಬ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ನಾಗರಿಕರಿಗೆ ಪ್ರತಿದಿನ ಒದಗಿಸಬೇಕಾದ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನಗರಸಭಾ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುರಿತಂತೆ ಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹಣೆಯಲ್ಲಿ ನಿಗದಿತ ಗುರಿ ಸಾಧನೆಯಾಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದುವರೆಗಿನ ತೆರಿಗೆ ಮತ್ತು ಬಾಕಿ ತೆರಿಗೆ ಪಾವತಿ ಮಾಡಬೇಕಿರುವವರ ಪಟ್ಟಿ ಮಾಡಿ, ಅವರಿಗೆ ನೋಟಿಸ್ ನೀಡಿ, ಅವರಿಂದ ಸಂಪೂರ್ಣ ತೆರಿಗೆಯನ್ನು ವಸೂಲಿ ಮಾಡುವಂತೆ ನಿರ್ದೇಶನ ನೀಡಿದರು.

ನಗರಸಭೆಯ ವಿವಿಧ ಯೋಜನೆಗಳಲ್ಲಿನ ಪ್ರಗತಿ ಕುರಿತಂತೆ ಪರಿಶೀಲಿಸಿ, ಎಲ್ಲ ಯೋಜನೆಗಳಲ್ಲಿ ಸಂಪೂರ್ಣ ಗುರಿ ಸಾಧಿಸಬೇಕು ಎಂದರು.

ನಗರಸಭೆ ಪ್ರಭಾರ ಪೌರಾಯುಕ್ತ ಕೆ.ಎಂ. ರವಿಕುಮಾರ ಹಾಗೂ ಅಧಿಕಾರಿಗಳು ಇದ್ದರು.