ರೈತರು ದಾಳಿಂಬೆ ಬೆಳೆ ಕೈ ಬಿಡದಂತೆ ನೋಡಿಕೊಳ್ಳಿ: ಶಾಸಕ ಜೆ.ಟಿ.ಪಾಟೀಲ

| Published : Dec 08 2024, 01:16 AM IST

ಸಾರಾಂಶ

ಇಸ್ರೇಲಿಗೆ ಹೋದರೆ ಬೆಳೆಗಳಿಗೆ ರೋಗ ಬಾಧೆಯ ಸಮಸ್ಯೆ ಇರಲ್ಲ. ಅಲ್ಲಿಯ ಪದ್ಧತಿಯನ್ನು ತೋವಿವಿ ಅಧ್ಯಯನ ಮಾಡಬೇಕು.

ಕನ್ನಡಪ್ರಭ ವಾರ್ತೆ ಕಲಾದಗಿ

ಇಡೀ ರಾಜ್ಯದಲ್ಲಿ ದಾಳಿಂಬೆ ಬೆಳೆಗೆ ಕಲಾದಗಿ ಗ್ರಾಮ ಪ್ರಸಿದ್ಧಿ ಹೊಂದಿದೆ. ಕೂಗಳತೆ ದೂರದಲ್ಲಿಯೇ ತೋಟಗಾರಿಕೆ ವಿಶ್ವ ವಿದ್ಯಾಲಯವಿದ್ದರೂ ದಾಳಿಂಬೆ ಬೆಳೆಗೆ ತಗುಲುತ್ತಿರುವ ರೋಗದಿಂದ ರೈತರಿಗೆ ಹೊರಗೆ ಬರಲು ಆಗುತ್ತಿಲ್ಲ ಇದು ವಿಷಾದನೀಯ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಹೇಳಿದರು.ಹಣ್ಣು ಬೆಳೆಗಾರರ ಸಂಘದ ಪ್ರೌಢ ಶಾಲಾ ಸಭಾಭವನದಲ್ಲಿ ನಡೆದ ತೋಟಗಾರಿಕೆ ಇಲಾಖೆ ಬಾಗಲಕೋಟೆ, ದಾಳಿಂಬೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಾಳಿಂಬೆ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಸ್ರೇಲಿಗೆ ಹೋದರೆ ಬೆಳೆಗಳಿಗೆ ರೋಗ ಬಾಧೆಯ ಸಮಸ್ಯೆ ಇರಲ್ಲ. ಅಲ್ಲಿಯ ಪದ್ಧತಿಯನ್ನು ತೋವಿವಿ ಅಧ್ಯಯನ ಮಾಡಬೇಕು. ಇಸ್ರೇಲ್ ಮಾದರಿ ಬೆಳೆ ಬೆಳೆದು ರೈತರು ಆರ್ಥಿಕ ಪ್ರಗತಿ ಹೊಂದುವಂತಾಗಬೇಕು. ಜಿಲ್ಲೆಯ ತೋವಿವಿ ವಿಜ್ಞಾನಿಗಳು ದುಂಡಾಣು ರೋಗ ಹತೋಟಿ ಮತ್ತು ಶಾಶ್ವತ ನಿರ್ಮೂಲನೆ ಬಗ್ಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕು. ರೈತರು ಕೆಲವು ಕಾರಣದಿಂದ ದಾಳಿಂಬೆ ಬೆಳೆ ಬಿಟ್ಟು ಬೇರೆ ಬೆಳೆಗಳಿಗೆ ಆಸಕ್ತಿ ತೋರುತ್ತಿದ್ದು, ಬೇರೆ ಬೆಳೆಗಳಿಗೆ ಮಾರು ಹೋಗದಂತೆ ಏನೆನೋ ಆಗಬೇಕು ಅದನ್ನು ತೋವಿವಿ ವಿಜ್ಞಾನಿಗಳು ಮಾಡಬೇಕು. ರೈತರ ಜೀವಾಳ ದಾಳಿಂಬೆ, ಈ ಬೆಳೆ ಕೈ ಬಿಡಲಾರದ ರೀತಿಯಲ್ಲಿ ವಿಚಾರ ಸಂಕಿರಣದಲ್ಲಿ ವಿಜ್ಞಾನಿಗಳು ಮಾರ್ಗದರ್ಶನ ನೀಡಬೇಕು ಎಂದರು.

ಹಲವು ರೈತರು ದಾಳಿಂಬೆ ಬೆಳೆಗೆ ತಗುಲುತ್ತಿರುವ ರೋಗ ಹಾಗೂ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ತಿಳಿಸಿದರು. ಶಾಸಕರು ರೈತರ ಸಮಸ್ಯೆ ಆಲಿಸಿ, ವಿಜ್ಞಾನಿಗಳು ರೋಗ ಹತೋಟಿಗೆ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸೂಚಿಸಿದರು. ಇದೇ ರೀತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಎಲ್ಲಾ ರೈತರು ತೋವಿವಿ ಮುಂದೆ ಪ್ರತಿಭಟನೆ ಮಾಡುವ ಕಾಲ ದೂರ ಇಲ್ಲ. ಹಾಗಾದಂತೆ ನೋಡಿಕೊಳ್ಳಬೇಕು ರೈತರ ತೋಟಗಳಿಗೆ ತೆರಳಿ ಮಾರ್ಗದರ್ಶನ ನೀಡಬೇಕು ಎಂದರು.

ಬಾಗಲಕೋಟೆ ತೋವಿವಿ ಕುಲಪತಿ ಡಾ.ವಿಷ್ಣವರ್ಧನ್ ಮಾತನಾಡಿ, ತಾಂತ್ರಿಕತೆಯಿಂದ ವಿಲ್ಟ್‌ ರೋಗವನ್ನು ಕಡಿಮೆ ಖರ್ಚಿನಲ್ಲಿ ಹೇಗೆ ನಿರ್ವಹಣೆ ಮಾಡಬಹುದು. ರೋಗದ ಬಾಧೆ ಹೆಚ್ಚಿದ್ದ ತೋಟಕ್ಕೆ ಬಂದು ವಿಜ್ಞಾನಿಗಳು ರೋಗ ಹತೋಟಿಗೆ ತಿಳುವಳಿಕೆ ನೀಡಲಿದ್ದಾರೆ. ತಾಂತ್ರಿಕತೆಯನ್ನು ರೈತರು ಅಳವಡಿಸಿಕೊಳ್ಳಬೇಕು. ಉತ್ಪದಾನಾ, ನಿರ್ವಹಣಾ, ಮಾರುಕಟ್ಟೆ ತಾಂತ್ರಿಕತೆ ಎಲ್ಲವನ್ನೂ ವಿಜ್ಞಾನಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಸಾಕಷ್ಟು ಸಮಸ್ಯೆಗಳಿಗೆ ತಾಂತ್ರಿಕತೆ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.

ಸೋಲಾಪುರದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಜ್ಯೋತ್ಸನಾ ಶರ್ಮಾ, ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಫಕೀರಪ್ಪ ಮಾದರ, ಜಿಲ್ಲಾ ತೋಟಗಾರಿಕೆ ಇಲಾಖಾ ಉಪನಿರ್ದೇಶಕ ರವೀಂದ್ರ ಹಕಾಟಿ, ಬಾಗಲಕೋಟೆ ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಸವರಾಜ ಗೌಡನವರ, ಸಹಾಯಕ ತೋಟಗಾರಿಕೆ ಅಧಿಕಾರಿ ಮಹಾಂತೇಶ ರಾಜೋಳಿ, ವಿಜಯಪುರ ತಿಡಗುಂದಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಣ್ಣ ಠೋಕೆ, ತೋವಿವಿ ಸಸ್ಯ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರಿ, ಕೀಟ ರೋಗಶಾಸ್ತ್ರ ವಿಭಾಗದ ಡಾ.ರಾಮನಗೌಡ ಎಸ್.ಎಚ್, ಮಾರುಕಟ್ಟೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಪಾದ ವಿಶ್ವೇಶ್ವರ ಇತರರಿದ್ದರು. ಎಂ.ಎ ತೇಲಿ ನಿರೂಪಿಸಿ ವಂದಿಸಿದರು.

ವಿಷಯುಕ್ತ ತರಕಾರಿಯಿಂದ ರೋಗಗಳು ಹೆಚ್ಚಾಗಿವೆ. ರಸಾಯನಿಕ ಮುಕ್ತ ಬೆಳೆ ಬೆಳೆಯಲು ವಿಜ್ಞಾನಿಗಳು ಮಾರ್ಗದರ್ಶನ ನೀಡಬೇಕು. ಅಧಿಕಾರಿಗಳು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ನಿಷೇಧ ಔಷಧ ಮಾರುವುದನ್ನು ಗಮನಿಸಬೇಕು. ಇದಕ್ಕೆ ಡಿಸಿ, ಸಿಇಒರಿಂದ ಅನುಮತಿ ಕೋಡಿಸುತ್ತೇನೆ. ಔಷಧ ಅಂಗಡಿಗಳ ಮೇಲೇ ಅಧಿಕಾರಿಗಳು ನಿಗಾಯಿಡಬೇಕು. ಮಾರಕವಾಗುವ ಔಷಧ ಮಾರಾಟವಾಗದಂತೆ ಕ್ರಮ ವಹಿಸಿಬೇಕು.

ಜೆ.ಟಿ.ಪಾಟೀಲ, ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ