ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಯಬೇಕಾದರೆ ಎನ್ಯೂಮರೇಷನ್ ಫಾರಂ ಭರ್ತಿ ಮಾಡುವುದು ಕಡ್ಡಾಯ

ಕುಷ್ಟಗಿ: ಮತದಾರರ ಪಟ್ಟಿ ದೋಷರಹಿತ ಸಿದ್ಧಪಡಿಸುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಗುರಿಯಾಗಿದ್ದು, ಯಾವುದೇ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಬೂತ್ ಲೆವೆಲ್ ಏಜೆಂಟರು (ಬಿಎಲ್ಎ) ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್ಒ) ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲ್ ನಲ್ಲಿ ಶುಕ್ರವಾರ ನಡೆದ ಬೂತ್ ಲೆವೆಲ್ ಏಜೆಂಟರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಜತೆಯಲ್ಲಿ ಬೂತ್ ಲೆವೆಲ್ ಏಜೆಂಟರು ಸಹಕಾರ ನೀಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಯಬೇಕಾದರೆ ಎನ್ಯೂಮರೇಷನ್ ಫಾರಂ ಭರ್ತಿ ಮಾಡುವುದು ಕಡ್ಡಾಯ. ಫಾರಂ ಸಲ್ಲಿಸದಿದ್ದರೆ ಮತದಾರರ ವಿವರ ಪರಿಶೀಲನೆಗೆ ತೊಂದರೆಯಾಗಬಹುದು. ಆದ್ದರಿಂದ ಪ್ರತಿಯೊಬ್ಬ ಅರ್ಹ ಮತದಾರರಿಗೂ ಫಾರಂ ತಲುಪಿಸಿ ಭರ್ತಿ ಮಾಡಿಸಬೇಕು ಎಂದು ಸೂಚಿಸಿದರು.

ಪ್ರತಿಯೊಬ್ಬ ಮತದಾರರ ಮನೆಗೆ ಎನ್ಯೂಮರೇಷನ್ ಫಾರಂ ಶೇ.100ರಷ್ಟು ತಲುಪಬೇಕು. ಈ ಕಾರ್ಯದಲ್ಲಿ ಬಿಎಲ್ಒಗಳಿಗೆ ಬೂತ್ ಲೆವೆಲ್ ಏಜೆಂಟರು ಸಂಪೂರ್ಣ ಸಹಕಾರ ನೀಡಬೇಕು. ಪ್ರತಿಯೊಬ್ಬ ಬಿಎಲ್ಒ ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಮೊದಲ ಬಾರಿ ಭೇಟಿ ನೀಡಿದಾಗ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಮರು ಭೇಟಿ ನೀಡುತ್ತಾರೆ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈ ತಪ್ಪಬಾರದು. ಅದೇ ಸಮಯದಲ್ಲಿ ಅನರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಗೊಂದಲದ ಪ್ರಶ್ನೆಗಳಿಗೆ ಬೂತ್ ಲೆವೆಲ್ ಏಜೆಂಟರು ಪರಿಹಾರ ಕಂಡುಕೊಂಡರು. ಜಿಲ್ಲಾಧಿಕಾರಿಗಳು ಖುದ್ದಾಗಿ ಸಮಸ್ಯೆ ನಿವಾರಿಸುವಲ್ಲಿ ಮುಂದಾದರು.

ಈ ತರಬೇತಿ ಕಾರ್ಯಾಗಾರದಲ್ಲಿ ತಹಸೀಲ್ದಾರ ಗುರುರಾಜ ಛಲವಾದಿ, ನಗರಾಭಿವೃದ್ದಿ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ತಾಪಂ ಇಒ ಅಮರೇಶ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಹನಮಸಾಗರ ಪಪಂ ಅಧಿಕಾರಿ ರೆಡ್ಡಿ ರಾಯನಗೌಡ, ಮುತ್ತಣ್ಣ ಅಂಗಡಿ, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ಅಜೀತ್ ಜೋಷಿ, ಸಂಪನ್ಮೂಲ ವ್ಯಕ್ತಿ ಕಿಶನರಾವ್‌ ಕುಲಕರ್ಣಿ, ಶರಣಪ್ಪ ತೆಮ್ಮಿನಾಳ, ಶರಣು ಹುಡೇದ, ಇಮಾಮಸಾಬ್ ಗರಡಿಮನಿ, ಸಂಗನಗೌಡ ಜೈನರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ, ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟರು ಸೇರಿದಂತೆ ಅನೇಕರು ಇದ್ದರು.