ಮಂಗಳೂರು: ಯಕ್ಷಗಾನ ಕೇವಲ ಮನೋರಂಜನೆಯಲ್ಲ. ಅದು ನಮ್ಮ ನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನೊಳಗೊಂಡ ಸಂಸ್ಕೃತಿಯ ಪ್ರತೀಕ ಎಂದು ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಹಾಗೂ ಸ್ವಸ್ತಿಕ ನ್ಯಾಶನಲ್ ಬ್ಯುಸಿನೆಸ್ ಸ್ಕೂಲ್ ಮಂಗಳೂರು ಸಹಯೋಗದಲ್ಲಿ ಬುಧವಾರ ನಗರದ ಸುಲ್ತಾನ್ ಬತ್ತೇರಿ ಸ್ವಸ್ತಿಕ ವಾಟರ್ಫ್ರಂಟ್ ಸಭಾಂಗಣದಲ್ಲಿ ನಡೆದ ‘ಚೌಕಿ: ಸ್ವರೂಪ ಮತ್ತು ವೈಶಿಷ್ಟ್ಯ ರಾಷ್ಟ್ರೀಯ ವಿಚಾರ ಸಂಕಿರಣ’ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನದಲ್ಲಿ ಸಂಗೀತ, ನಾಟ್ಯ, ಅಭಿನಯ, ಮಾತುಗಾರಿಕೆ, ಯಕ್ಷಗಾನ ಪದ್ಯದಲ್ಲಿ ಕನ್ನಡದ ಛಂದಸ್ಸು ಎಲ್ಲವೂ ಇದೆ. ಯಕ್ಷಗಾನಕ್ಕೆ ಹಿಮ್ಮೇಳ ಸೇರುವಾಗ ಭಾವನೆ, ಕುಣಿದಾಗ ಇನ್ನೊಂದು ಹಂತಕ್ಕೆ ಹೋಗುತ್ತದೆ. ಯಕ್ಷಗಾನದ ಒಂದೊಂದು ವಿಷಯವೂ ಅಧ್ಯಯನ ನಡೆಸುವಂತಹದ್ದೇ, ಚೌಕಿ ಎಂಬುದರಲ್ಲೇ ನಾವು ಸಾಕಷ್ಟು ರೀತಿಯ ಅಧ್ಯಯನ ನಡೆಸುವ ವಿಚಾರಗಳಿವೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಯಕ್ಷಗಾನದ ಚೌಕಿಯನ್ನು ಸಣ್ಣದಾಗಿ ಭಾವಿಸುತ್ತೇವೆ. ಆದರೆ ಚೌಕಿಯ ಮಹತ್ವ ಏನು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಯಕ್ಷಗಾನದ ಚೌಕಿಗೆ ಶಿಸ್ತು, ವ್ಯವಸ್ಥೆ, ಅರ್ಥ ಇದೆ. ಅದು ಪರಂಪರೆಯಿಂದ ಸಿಕ್ಕಿದೆ. ಚೌಕಿಗೂ ಒಂದು ಉನ್ನತ ಸ್ಥಾನಮಾನ ಸಿಕ್ಕಿದೆ ಎಂಬುದನ್ನು ತಿಳಿಸಿಲು ಈ ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದರು.ಮಂಗಳೂರು ಸ್ವಸ್ತಿಕ ನ್ಯಾಶನಲ್ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಎನ್.ಅಧ್ಯಕ್ಷತೆ ವಹಿಸಿದ್ದರು.ಭಾಗ್ಯಶ್ರೀ ಸ್ವಾಗತಿಸಿದರು. ಡಾ.ಸತೀಶ್ ಕೊಣಾಜೆ ವಂದಿಸಿದರು. ಉಪಪ್ರಾಂಶುಪಾಲೆ ವಿದ್ಯಾಲಕ್ಷ್ಮಿ ನಿರೂಪಿಸಿದರು.
ವಿಚಾರಗೋಷ್ಠಿ: ‘ಚೌಕಿಯ ಸ್ವರೂಪ ಮತ್ತು ಮಹತ್ವ’ದ ಬಗ್ಗೆ ಯಕ್ಷಗಾನ ವಿದ್ವಾಂಸ ಡಾ. ರಾಘವ ನಂಬಿಯಾರ್, ‘ಚೌಕಿಯ ಪರಂಪರೆ ಮತ್ತು ವರ್ತಮಾನ’ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಶಿವಶಂಕರ ಭಟ್ ದಿವಾಣ ಎಡನಾಡು, ‘ಚೌಕಿಯ ಸ್ವಾರಸ್ಯಗಳು’ ಬಗ್ಗೆ ಯಕ್ಷಗಾನ ಕಲಾವಿದ ರವಿಶಂಕರ್ ವಳಕುಂಜ ಉಪನ್ಯಾಸ ನೀಡಿದರು. ಬಳಿಕ ಮಣಿಪಾಲ ಮಾಹೆ ಸಹಾಯಕ ಪ್ರಾಧ್ಯಾಪಕ ಡಾ.ಪೃಥ್ವಿರಾಜ್ ಕವತ್ತಾರು ಅಧ್ಯಕ್ಷತೆಯಲ್ಲಿ ಸಂಶೋಧಕರಿಂದ ಪ್ರಬಂಧ ಮಂಡನಾ ಗೋಷ್ಠಿ ನಡೆಯಿತು.