ಕಾಪು: ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕ, ಐಇಇಇ ಬೆಂಗಳೂರು ಘಟಕ ಹಾಗೂ ಉದ್ಯಮಶೀಲತಾ ಅಭಿವೃದ್ದಿ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಫ್ರೆಶರ್ಸ್ ಟು ವೆಂಚರ್’ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನೆಕ್ಸ್ಟ್ ಸ್ಕೇಲ್ ಟೆಕ್ ಪ್ರೈವೇಟ್ ಲಿಮಿಟೆಡ್ನ ಸಹ-ಸಂಸ್ಥಾಪಕಿ ಹಾಗೂ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಭಟ್ ಭಾಗವಹಿಸಿ, ಉದ್ಯಮಶೀಲತೆಯ ಮೂಲ ತತ್ವಗಳು, ಸ್ಪಾರ್ಟ್ ಅಪ್ ಪರಿಸರ ವ್ಯವಸ್ಥೆ ಹಾಗೂ ನವೋದ್ಯಮದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಇಂಜಿನಿಯರಿಂಗ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಗಳಿಸುವ ಜ್ಞಾನ ಮತ್ತು ಕೌಶಲ್ಯಗಳು ಉದ್ಯಮಿಯಾಗಲು ಭದ್ರ ಅಡಿಪಾಯವಾಗಿದೆ. ನೈಜ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ನವೀನ ಪರಿಹಾರಗಳನ್ನು ರೂಪಿಸುವ ಮೂಲಕ ಯಶಸ್ವಿ ಉದ್ಯಮವನ್ನು ಕಟ್ಟಬಹುದು ಎಂದ ಅವರು, ಸಮಸ್ಯೆ-ಪರಿಹಾರ ಹೊಂದಾಣಿಕೆ, ಮಾರುಕಟ್ಟೆ ಹೊಂದಾಣಿಕೆ ಹಾಗೂ ಉತ್ಪನ್ನ ದೃಡೀಕರಣದಂತಹ ಪ್ರಮುಖ ವಿಷಯಗಳನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿ, ವಿದ್ಯಾರ್ಥಿಗಳಲ್ಲಿ ಉದ್ಯಮದ ಬಗ್ಗೆ ಒಲವು ತೋರುವ ಮನೋಭಾವ ಬೆಳೆಸಲು ಕರೆ ನೀಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವ ಜೊತೆಗೆ ತಮ್ಮ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸಿಕೊಳ್ಳುವ ಆತ್ಮವಿಶ್ವಾಸವನ್ನು ಮೂಡಿಸಿತು. ಐಇಇಇ ಘಟಕದ ಸಂಯೋಜಕರಾದ ನಾಗರಾಜ್ ರಾವ್ ಕಾರ್ಯಕ್ರಮ ಸಂಯೋಜಿಸಿದರು.