ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪ ಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತಂಬಾಕು ಅಥವಾ ಸಾಂಪ್ರದಾಯಿಕ ಮಾದಕ ವಸ್ತುಗಳಿಗೆ ಮಾತ್ರ ಸೀಮಿತವಾಗಿದ್ದ ಮಾರುಕಟ್ಟೆಗೆ ಇದೀಗ ಅಪಾಯಕಾರಿ ಸಿಂಥೆಟಿಕ್ ಮಾದಕ ದ್ರವ್ಯಗಳು ಲಗ್ಗೆ ಇಡುತ್ತಿವೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಆತಂಕ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪ ಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಸಿಂಥೆಟಿಕ್ ಮಾದಕ ದ್ರವ್ಯಗಳು ಸಮಾಜಕ್ಕೆ ಮತ್ತು ವಿಶೇಷವಾಗಿ ಯುವ ಜನತೆಗೆ ಭಾರಿ ಕಂಟಕವಾಗಿ ಪರಿಣಮಿಸಿದೆ. ಈ ಸಿಂಥೆಟಿಕ್ ಮಾದಕ ದ್ರವ್ಯಗಳು ಯುವ ಪೀಳಿಗೆ ಭವಿಷ್ಯ ಹಾಗೂ ಸಾಮರ್ಥ್ಯ ಕುಂಠಿತಗೊಳಿಸುತ್ತಿದೆ. ಯುವಕರು ಇಂತಹ ದುಶ್ಚಟಗಳಿಂದ ದೂರವಿರಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ಕಡಿಮೆ ವಯಸ್ಸಿನ ಮಕ್ಕಳಲ್ಲಿ ಯೋಚನಾ ಶಕ್ತಿ ಮತ್ತು ಸೂಕ್ಷ್ಮತೆ ಹೆಚ್ಚಿರುವುದರಿಂದ ಅವರು ಇಂತಹ ಜಾಲಗಳಿಗೆ ಸುಲಭವಾಗಿ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು, ಶಾಲಾ-ಕಾಲೇಜು ಹಾಗೂ ಸುತ್ತಮುತ್ತಲಿನ ನೆರೆ-ಹೊರೆಯವರು ಎಚ್ಚರಿಕೆ ಯಿಂದ ಇರಬೇಕು. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.


ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪೊಲೀಸ್ ಇಲಾಖೆ ಶಾಲಾ-ಕಾಲೇಜುಗಳು ಮತ್ತು ಬಡಾವಣೆಗಳಲ್ಲಿ ನಿರಂತರವಾಗಿ ಹತ್ತು ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹನುಮಂತಪ್ಪ ಮಾತನಾಡಿ ಒಂದು ದೇಶವನ್ನು ಹಾಳು ಮಾಡಲು ಅಥವಾ ಸಂಪೂರ್ಣವಾಗಿ ನಾಶ ಮಾಡಲು ಯುದ್ಧ ಸಾರಿ ಬಾಂಬ್ ದಾಳಿ ನಡೆಸುವ ಅವಶ್ಯಕತೆಯೇ ಇಲ್ಲ. ಯುವ ಪೀಳಿಗೆಗೆ ಮಾದಕ ವಸ್ತು ತಲುಪಿಸಿದರೆ ಸಾಕು. ಇಡೀ ದೇಶವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯುವಜನ ಒಮ್ಮೆ ಮಾದಕ ದ್ರವ್ಯಗಳ ದಾಸರಾದರೆ ಅವರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಆಲೋಚನಾ ಶಕ್ತಿ ಸಂಪೂರ್ಣ ವಾಗಿ ನಶಿಸಿಹೋಗುತ್ತದೆ. ದೇಶ ಇಂತಹ ದುಸ್ಥಿತಿಗೆ ತಳ್ಳಲು ದೇಶವಿರೋಧಿ ಶಕ್ತಿಗಳು ನಿರಂತರವಾಗಿ ಸಂಚು ರೂಪಿಸುತ್ತಿದ್ದು, ಯುವ ಜನರನ್ನು ಗುರಿಯಾಗಿಸಿಕೊಂಡು ಮಾದಕ ಜಾಲ ಹರಡುತ್ತಿವೆ ಎಂದು ಎಚ್ಚರಿಸಿದರು.ಮಾದಕ ದ್ರವ್ಯಗಳ ಸೇವನೆಯಿಂದ ಕೇವಲ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲದೆ ಇಡೀ ಕುಟುಂಬ ಬೀದಿಗೆ ಬೀಳುತ್ತದೆ. ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ ಕೂಡ ಹಾಳಾಗುತ್ತದೆ. ಈ ಭೀಕರ ಪಿಡುಗಿನ ವಿರುದ್ಧ ದೇಶಾದ್ಯಂತ ವ್ಯಾಪಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ ದೇಶದಲ್ಲಿ ಮಾದಕ ದ್ರವ್ಯಗಳ ಬಳಕೆ ಮತ್ತು ಜಾಲ ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಯಾರು ಈ ಮಾದಕ ದ್ರವ್ಯ ಬಳಸುತ್ತಾರೋ, ಅವರೆಲ್ಲರೂ ನಮ್ಮ ಪೊಲೀಸ್ ಇಲಾಖೆಯ ‘ಕ್ಲೈಂಟ್‌’ಗಳಾಗುತ್ತಾರೆ " ಎಂದು ಎಚ್ಚರಿಕೆ ನೀಡಿದರು.

ಯುವಜನತೆ ದಯವಿಟ್ಟು ಯಾವುದೇ ಕಾರಣಕ್ಕೂ ನಮ್ಮ ಪೊಲೀಸ್ ಇಲಾಖೆಯ ‘ಕ್ಲೈಂಟ್’ಗಳಾಗಬೇಡಿ. ಅದರ ಬದಲು ಶಿಕ್ಷಣ ಇಲಾಖೆ ಕ್ಲೈಂಟ್‌ಗಳಾಗಿ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಹಾಗೂ ಸಮಾಜದ ಆಸ್ತಿಯಾಗಿ ರೂಪಗೊಳ್ಳಿ ಎಂದು ಕಿವಿಮಾತು ಹೇಳಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಕುಮಾರ್‌ ಸೇರಿದಂತೆ ಮೊದಲಾದವರಿದ್ದರು.

---ಬಾಕ್ಸ್‌===

ಮಾದಕ ವಸ್ತು ವಿರೋಧಿ ಜಾಥಾ

ಮಾದಕ ವಸ್ತು ಬಳಕೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೊಲೀಸರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಆರಂಭಗೊಂಡ ಮಾದಕ ವಸ್ತು ವಿರೋಧಿ ಜಾಥಾ ಎಂ.ಜಿ.ರಸ್ತೆ ಮೂಲಕ ಹನು ಮಂತಪ್ಪ ವೃತ್ತದ ತಾಲೂಕು ಕಚೇರಿಯಲ್ಲಿ ಅಂತ್ಯಗೊಂಡಿತ್ತು. ಜಾಥಾದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೊಲೀಸ್‌ ಅಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು. ಮಾದಕ ವಸ್ತು ವಿರುದ್ಧ ಫೋಷಣೆ ಕೂಗಲಾಯಿತು.

ಫೋಟೋ--

''''''''ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ''''''''ದ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಭನ್ವರ್‌ಸಿಂಗ್‌ ಮೀನಾ ಚಾಲನೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹನುಮಂತಪ್ಪ, ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ ಇದ್ದರು.