ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಪರಿಸರ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಲಕ್ಷ್ಮಿಪುರ ಗ್ರಾಮದ ಶ್ರೀಗಿರಿ ಮಠದ ಪೀಠಾಧಿಪತಿ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಜನ್ಮದಿನದ ನಿಮಿತ್ತ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ಕೊಡುವ ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಅವರು, ಇರುವುದೊಂದೇ ಭೂಮಿ, ಪರಿಸರವೇ ನಮ್ಮೆಲ್ಲರ ಆಸ್ತಿ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕೋಣ ಎಂದರು.
ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು. ನಮ್ಮ ಭೂಮಿ ನಮ್ಮ ಭವಿಷ್ಯವಾಗಿದ್ದು ಅದನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಪ್ರತಿ ವ್ಯಕ್ತಿ ಸಸಿ ನೆಡುವ ಮೂಲಕ ಪರಿಸರ ಪ್ರಗತಿಗೆ ಒತ್ತು ಕೊಡಬೇಕು. ಪ್ರತಿಯೊಬ್ಬರು ದೈನಂದಿನ ಕಾರ್ಯಗಳು ಮಾಡಿದಂತೆ ಪರಿಸರ ಉಳಿವಿಗೆ ಕಾಳಜಿ ವಹಿಸಿ ಹಸಿರು ಬೆಳಸಿ ಜೀವ ಸಂಕುಲ ಉಳಿಸಬೇಕು ಎಂದು ಸಲಹೆ ನೀಡಿದರು.ಮಠದ ಪೂಜ್ಯರ ಜನ್ಮದಿನದ ನಿಮಿತ್ತ ಸಸಿ ನೀಡುವ ಮೂಲಕ ಭಕ್ತರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಮತ್ತು ಇದು ಪ್ರಶಂಸನೀಯ. ಕಳೆದ ವರ್ಷವೂ ಪೂಜ್ಯರ ಜನ್ಮದಿನಾಚರಣೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಜನರಿಗೆ ರಕ್ತದಾನದ ಮಹತ್ವ ತಿಳಿಸಲಾಗಿತ್ತು. ಈ ಬಾರಿ ಪರಿಸರದ ಜಾಗೃತಿಗೈದಿರುವುದು ಶ್ಲಾಘನೀಯ. ಪೂಜ್ಯರ ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಸಸಿ ನೆಡೋಣ, ಪರಿಸರ ಉಳಿಸೋಣ ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಸಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡಲಾಯಿತು.ಸಗರದ ಒಕ್ಕಲಿಗರ ಹಿರೇಮಠ ಸಂಸ್ಥಾನದ ಮರುಳ ಮಹಾಂತ ಶಿವಾಚಾರ್ಯರು, ನೀಲಗಲ್ಲದ ರೇಣುಕಾ ಶಾಂತಮಲ್ಲ ಶಿವಾಚಾರ್ಯರು, ಇಟಗಾ ಬಸವಲಿಂಗೇಶ್ವರ ಸಂಸ್ಥಾನದ ಚಂದ್ರಶೇಖರ ದೇವರು, ಹಿಮಾಲಯ್ಯ ಮುತ್ಯಾ ಸೇರಿದಂತೆ ವಿವಿಧ ಮಠಾಧೀಶರು, ನಗರ ಸೇರಿ ನಾನಾ ಗ್ರಾಮಗಳ ಭಕ್ತರು ಇದ್ದರು.