ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮನುಕುಲದ ಉಳಿವಿಗಾಗಿ ಪರಿಸರದ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ವಿಜಯಪುರದ ಉಪ ಅರಣ್ಯ ಸಂರಕ್ಷಾಧಿಕಾರಿ ವನಿತಾ.ಆರ್ ಹೇಳಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಉಪಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅರಣ್ಯ ಇಲಾಖೆ ನಗರದಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಕಾರ್ಯಕ್ರಮಗಳಾದ ಕೋಟಿ ವೃಕ್ಷ ಆಂದೋಲನ ಹಾಗೂ ಸಾರ್ವಜನಿಕರಿಗೆ ಮೊಳಕೆ ಸಸಿಗಳ ವಿತರಣೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಹಸಿರಿಲ್ಲದೆ ಉಸಿರಿಲ್ಲ ಎಂಬ ನುಡಿಯನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಪರಿಸರ ದಿನಾಚರಣೆಗಷ್ಟೆ ಸಸಿಗಳನ್ನು ನೆಡುವುದನ್ನು ಸೀಮಿತಗೊಳಿಸದೇ, ಅವುಗಳನ್ನು ಪೋಷಿಸಿ ಬೆಳಸಬೇಕು. ಪಶುಪಕ್ಷಿಗಳು ಪ್ರಕೃತಿಯ ಒಂದು ಭಾಗ ಶುದ್ಧ ಪರಿಸರವಿದ್ದರೆ ಮಾತ್ರ ಅವುಗಳಿಗೂ ಉಳಿಗಾಲ ನಮಗೂ ಉಳಿಗಾಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಸಿರೀಕರಣ ಪ್ರಯತ್ನಗಳು ಬಹಳಷ್ಟು ಸವಾಲಿನಿಂದ ಕೂಡಿದ್ದವು. ಇಂದು ವಿವಿಯ ಆವರಣದಲ್ಲಿ ಹಸಿರು ಕಾಣಿಸುತ್ತಿದೆ. ಇದಕ್ಕೆಲ್ಲ ಬಹಳಷ್ಟು ಜನರ ಸಹಕಾರ ಹಾಗೂ ಶ್ರಮ ಬಳಕೆಯಾಗಿದೆ. ನಾವು ಗಿಡ-ಮರಗಳನ್ನು ಕಡಿದು ಹಾಕುವುದನ್ನು ನೋಡಿದಾಗ ಅಲ್ಲಿಯೇ ನಿಂತು ಬುದ್ದಿವಾದ ಹೇಳಿ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ವತಿಯಿಂದ ಪ್ರತೀ ವರ್ಷ ೫೦೦ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿರುವುದು ಶ್ಲಾಘನೀಯವೆಂದರು. ಇದೇ ಸಮಯದಲ್ಲಿ ವಿವಿಯ ಆವರಣದಲ್ಲಿ ವಿಶೇಷ ಸಸಿಗಳ ಸಸ್ಯೋದ್ಯಾನ ಸ್ಥಾಪಿಸಲು ಅಗತ್ಯ ನೆರವನ್ನು ಅರಣ್ಯ ಇಲಾಖೆ ನೀಡಬೇಕೆಂದು ಕೋರಿದರು. ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ಒಂದು ಸಸಿ ನೆಟ್ಟು, ಪೋಷಿಸಿ, ಮುಂದಿನ ಪೀಳಿಗೆಗೆ ಶಾಶ್ವತ ಹಸಿರಾದ ಕೊಡುಗೆಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷೀದೇವಿ.ವೈ, ವಿಭಾಗದ ಅಧ್ಯಾಪಕಿ ಡಾ.ಫಿರದೋಸ್ ಕೊಲ್ಹಾರ, ವಿಭಾಗದ ಸಂಯೋಜಕ ಡಾ.ನಟರಾಜ ದುರ್ಗಣ್ಣವರ, ಡಾ.ಆರತಿ, ಡಾ.ಪ್ರತಿಮಾ.ಎಚ್, ಡಾ.ಅಜಯನ್.ಕೆ.ವಿ ಭಾಗವಹಿಸಿದ್ದರು.