ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ: ರವೀಶ್

| Published : Jun 08 2025, 01:31 AM IST / Updated: Jun 08 2025, 01:32 AM IST

ಸಾರಾಂಶ

ಬಾಳೆಹೊನ್ನೂರು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಎಸ್‌ಐ ರವೀಶ್ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಎಸ್‌ಐ ರವೀಶ್ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಪರಿಸರವಿದ್ದಲ್ಲಿ ಮಾತ್ರ ನಮಗೆ ಉತ್ತಮ ಆರೋಗ್ಯ ದೊರೆಯಲು ಸಾಧ್ಯವಿದೆ. ಪರಿಸರವಿಲ್ಲದಿದ್ದರೆ ಭೂಮಿಯಲ್ಲಿ ಅಸಮತೋಲನ ಉಂಟಾಗಿ ಹತ್ತಾರು ಸಮಸ್ಯೆ ಉದ್ಭವಿಸಲಿದೆ. ಈ ಹಿನ್ನೆಲೆ ಯಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಟ ಒಂದು ಗಿಡವನ್ನಾದರೂ ನೆಡಬೇಕು ಎಂದರು.

ಅರಣ್ಯ ನಾಶದಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಭೂಮಿ ತಾಪಮಾನ ಹೆಚ್ಚಾಗುತ್ತಿದೆ. ಊರಿಗೊಂದು ಶಾಲೆ ಮನೆ ಗೊಂದು ಮರ ನೆಡಬೇಕಾದ ಸದುದ್ದೇಶ ಎಲ್ಲರಲ್ಲೂ ಬೆಳೆದು ಬರಬೇಕಾಗಿದೆ. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗೆಗೆ ಹೆಚ್ಚಿನ ಅರಿವು ಉಂಟು ಮಾಡುವ ಅವಶ್ಯಕತೆಯಿದೆ. ಪರಿಸರಕ್ಕೆ ಮಾರಕವಾದ ರಾಸಾಯನಿಕ ಗೊಬ್ಬರದ ಬದಲಾಗಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಭೂಮಿಯ ಶಕ್ತಿ ಸರಿಯಾಗಿರಲು ಸಾಧ್ಯವಾಗುತ್ತದೆ ಎಂದರು.

ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಮಾನವನ ಅತಿಯಾದ ದುರಾಸೆಯಿಂದ ಪ್ರಕೃತಿ ನಾಶವಾಗಿ ಭೂಮಿ ಯಲ್ಲಿ ಅಸಮತೋಲನ ಉಂಟಾಗಿದೆ. ಮನುಷ್ಯರು ತಮ್ಮ ಅಂತ್ಯವಿಲ್ಲದ ಆಸೆ, ಆಕಾಂಕ್ಷೆಗಳಿಗೆ ಪರಿಸರವನ್ನು ಬಲಿ ಕೊಡುತ್ತಿದ್ದು ಇದರಿಂದಾಗಿಯೇ ಇಂದು ಹಲವೆಡೆ ಭೂಕುಸಿತ, ನೀರಿಗೆ ಹಾಹಾಕಾರ, ಆಹಾರ ಕೊರತೆ ಸೇರಿದಂತೆ ಹಲವು ಸಮಸ್ಯೆ ತಲೆದೋರಿವೆ.ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ಜನಾಂಗಕ್ಕೆ ಭೂಮಿ, ನೀರು, ಮಣ್ಣಿನ ರಕ್ಷಣೆ ನೀಡಿ ಅವರಿಗೆ ಹಸ್ತಾಂತರಿಸಬೇಕಾದ ಮಹತ್ತರ ಕರ್ತವ್ಯ ನಮ್ಮ ಮೇಲಿದೆ ಎಂದರು.

ಜೇಸಿಐ ಪೂರ್ವಾಧ್ಯಕ್ಷ ಸುಧಾಕರ್, ರಿಚರ್ಡ್ ಮಥಾಯಿಸ್, ಸದಸ್ಯರಾದ ಕಿಶೋರ್, ಚೇತನ್‌ಕುಮಾರ್, ಶಾಹಿದ್ ಮತ್ತಿತರರು ಹಾಜರಿದ್ದರು.೦೬ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ಜೇಸಿಐ ಸಂಸ್ಥೆ ಆಯೋಜಿಸಿದ್ದ ಪರಿಸರ ದಿನಾಚರಣೆ ಅಂಗವಾಗಿ ಪೊಲೀಸ್ ಠಾಣೆಗೆ ವಿವಿಧ ಹಣ್ಣಿನ ಗಿಡಗಳನ್ನು ನೀಡಲಾಯಿತು. ಪಿಎಸ್‌ಐ ರವೀಶ್, ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ, ಸುಧಾಕರ್, ರಿಚರ್ಡ್ ಕಿಶೋರ್, ಚೇತನ್, ಶಾಹಿದ್ ಇದ್ದರು.