ಪರಿಸರ ಇದ್ದರಷ್ಟೇ ಮನುಷ್ಯರು ಬದುಕಬಲ್ಲರು. ವಿದ್ಯೆಯೊಂದಿಗೆ ಪರಿಸರವನ್ನು ಸಂರಕ್ಷಿಸುವುದು ಕೂಡ ಮುಂದಿನ ಪೀಳಿಗೆಗೆ ನಾವು ಕೊಡುವ ಸಂಪತ್ತು ಆಗಿದೆ.
ಮಂಡ್ಯ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ ತಿಳಿಸಿದರು. ನಗರದ 15 ನೇ ವಾರ್ಡ್ನ ಶಂಕರನಗರದಲ್ಲಿ ನವಚೇತನ ಲಯನ್ ಸಂಸ್ಥೆ ಹಾಗೂ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಗೆ ಇಂದು ತುರ್ತು ಆದ್ಯತೆ ನೀಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದೆ. ನಾವು ಸೇವಿಸುವ ಗಾಳಿ, ನೀರು ಎಲ್ಲವೂ ಕಲುಷಿತಗೊಂಡಿವೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿರುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು. ಪರಿಸರ ಇದ್ದರಷ್ಟೇ ಮನುಷ್ಯರು ಬದುಕಬಲ್ಲರು. ವಿದ್ಯೆಯೊಂದಿಗೆ ಪರಿಸರವನ್ನು ಸಂರಕ್ಷಿಸುವುದು ಕೂಡ ಮುಂದಿನ ಪೀಳಿಗೆಗೆ ನಾವು ಕೊಡುವ ಸಂಪತ್ತು ಆಗಿದೆ ಎಂದರು.ಮಂಡ್ಯ ನವಚೇತನ ಲಯನ್ ಸಂಸ್ಥೆ ಅಧ್ಯಕ್ಷ ಕೆ.ಎನ್.ಮೋಹನ್ ಕುಮಾರ್, ಕಾರ್ಯದರ್ಶಿ ಎಂ.ಎನ್.ಚಂದ್ರಶೇಖರ್ , ಚಂದ್ರಶೇಖರ್ ರೆಡ್ಡಿ, ಉದಯಶಂಕರ್, ಸುಜಾತ ರೆಡ್ಡಿ, ನಗರಸಭೆ ಸದಸ್ಯ ಟಿ.ಕೆ. ರಾಮಲಿಂಗಯ್ಯ, ಬೋರೇಗೌಡ, ಚಂದ್ರಲಿಂಗು, ಶ್ರೀನಿವಾಸ ಶೆಟ್ಟಿ, ಚಂದ್ರಲಿಂಗು, ರವಿ ಸೇರಿದಂತೆ ಇತರರು ಭಾಗವಹಿಸಿದ್ದರು.