ಸಾರಾಂಶ
ಸುರಪುರ ನಗರದ ತಾಲೂಕು ಕಚೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಸಸಿ ನೆಟ್ಟರು.
ಕನ್ನಡಪ್ರಭ ವಾರ್ತೆ ಸುರಪುರ
ಮಣ್ಣು, ನೀರು, ಸಸ್ಯರಾಶಿ ಇವೆಲ್ಲವೂ ಪ್ರಾಕೃತಿಕ ಸಂಪತ್ತಾಗಿದ್ದು, ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿ ಮನೆಗೊಂದು ಗಿಡಬೆಳೆಸಬೇಕು ಎಂದು ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಹೇಳಿದರು.ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನ ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ನಾಶದಿಂದ ಇಂದು ಮಳೆಯ ಕೊರತೆ, ತಾಪಮಾನ ಏರಿಕೆ, ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ ಎಂದರು.
ಪರಿಸರ ಸಂರಕ್ಷಣೆ ಅಧಿಕಾರಿಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ಜಾಗೃತರಾಗಬೇಕು. ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಮಂತ್ರ ಘೋಷ ಅವರ ಮನಸ್ಸಿನಲ್ಲಿ ಮೂಡಬೇಕು. ಯುವಜನತೆ, ಸಾರ್ವಜನಿಕರು ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಮನೆ ಮನೆಗೊಂದು ಸಸಿ ನೆಡುವ ಮೂಲಕ ಪರಿಸರ ಬೆಳೆಸಬೇಕು. ಆಗಲೇ ನಮ್ಮ ನಾಡು ಉತ್ತಮ ಪರಿಸರ ನಾಡು ಆಗುತ್ತದೆ. ಇದು ಮುಂದಿನ ಪೀಳಿಗೆಗೆ ಪ್ರತಿಯೊಬ್ಬರು ನೀಡುವ ಉತ್ತಮ ಕೊಡುಗೆಯಾಗಿದೆ ಎಂದು ತಿಳಿಸಿದರು.ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.