ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹಕ್ಕು. ನಮ್ಮ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಕೋವರ್‌ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಪಾಲೇಕಂಡ ಉತ್ತಮ್ ಮುತ್ತಣ್ಣ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ‘ಭುವನಕ್ಕೊಂದು ಸದನ’ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಿಚನ್‌ ಗಾರ್ಡನ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗಿಡ ನೆಟ್ಟು ನೀರೆರೆಯುವ ಮೂಲಕ ಕೈತೋಟಕ್ಕೆ ಚಾಲನೆ ನೀಡಿದ ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ದಾನಿ ಮಣವಟ್ಟೀರ ಹರೀಶ್ ಅಯ್ಯಣ್ಣ ಮಾತನಾಡಿ, ಹೊಸ ಚಿಂತನೆಯ, ಹೊಸ ಮನೋಭಾವದ ಪ್ರಕೃತಿಯನ್ನು ಪ್ರೀತಿಸುವ ಮಕ್ಕಳು ಇಂದು ಬರಬೇಕಾಗಿದೆ ಎಂದರು. ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎ. ಯಶ್ವಿತ್ ಕುಮಾರ್ ಮಾತನಾಡಿದರು. ಶಿಕ್ಷಕಿ ಎಸ್.ಎಸ್. ರಂಜಿನಿ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲ ಎಚ್.ಕೆ. ಉಮೇಶ್ ಕುಮಾರ್‌ ಮತ್ತಿತರರಿದ್ದರು.