ಸಾರಾಂಶ
ಪರಿಸರ ರಕ್ಷಣೆ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾದಾಗ ಮಾತ್ರ ಭವಿಷ್ಯದ ಪೀಳಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಗಜೇಂದ್ರಗಡ: ಪರಿಸರ ರಕ್ಷಣೆ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾದಾಗ ಮಾತ್ರ ಭವಿಷ್ಯದ ಪೀಳಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಪಟ್ಟಣದ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಗುರುವಾರ ನಡೆದ ವಿಶ್ವದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಉಂಟಾಗುತ್ತಿರುವ ಪರಿಸರ ಅಸಮತೋಲನಕ್ಕೆ ಪರಿಹಾರವೆಂದರೆ ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವುದು. ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರ ಬೆಳೆಸಲು ಹಾಗೂ ರಕ್ಷಣೆಗೆ ಮುಂದಾದರೆ ಮಾತ್ರ ಉತ್ತಮ ಆಮ್ಲಜನಕ ಲಭ್ಯವಾಗಲಿದೆ. ಪರಿಸರ ನಾಶವಾದರೆ ಜೀವಸಮೂಹಕ್ಕೆ ಕಂಟಕ ಎದುರಾಗಲಿದೆ ಎಂದರು.ಈ ವೇಳೆ ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ಜಿ.ಎನ್. ಕಾಳೆ, ಶಿವಕುಮಾರ ಇಲಾಳ, ಮಲ್ಲಿಕಾರ್ಜುನಯ್ಯ ಬಿ, ಎನ್.ಎಚ್. ಖುದಾನವರ, ಶಾಲೆಯ ಸಿ.ಎಸ್. ಮೂರಶಿಳ್ಳಿನ, ಎಸ್.ಎಸ್. ನರೇಗಲ್ ಹಾಗೂ ರಾಘವೇಂದ್ರ ಮಂತಾ, ಮೈಬೂ ಚಾಮಲಾಪುರ ಇದ್ದರು. ಈದ್ಗಾ ಮೈದಾನ:ಪಟ್ಟಣದ ಈದ್ಗಾ ಮೈದಾನದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮೈದಾನದಲ್ಲಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿಯ ಚೇರ್ಮನ್ ಹಸನಸಾಬ ತಟಗಾರ ಮಾತನಾಡಿ, ಸಮಾಜ ಬೆಳೆದಂತೆಲ್ಲ ಪರಿಸರ ಕಾಳಜಿ ಮರೆತಿದೆ. ಪರಿಸರ ನಾಶದಿಂದಲೇ ಇಂದು ಪ್ರಕೃತಿಯಲ್ಲಿ ಏರು ಪೇರುಗಳಾಗುತ್ತಿವೆ. ಜನರು ಹೆಚ್ಚೆಚ್ಚು ಗಿಡ ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಯ್ದುಕೊಂಡು ವಿಶ್ವವನ್ನು ರಕ್ಷಿಸಬೇಕಿದೆ ಎಂದರು. ದಾವಲ ತಾಳಿಕೋಟಿ, ಎ.ಕೆ.ಕಾತರಕಿ, ನಾಸೀರ ಸುರಪುರ ಇದ್ದರು.ಎಸ್ಎಂಬಿ ಪದವಿ ಕಾಲೇಜು;ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆಯ ಜಾಗೃತಿ ಮೂಡಿಸಲಾಯಿತು. ಈ ವೇಳೆ ಹಿರಿಯ ಉಪನ್ಯಾಸಕ ಬಿ.ವಿ. ಮನವಳ್ಳಿ ಮಾತನಾಡಿ, ವಿಶ್ವ ಪರಿಸರದ ದಿನದ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಂ.ಎಲ್. ಕ್ವಾಟಿ, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಎಲ್.ಕೆ. ಹಿರೇಮಠ, ಎಲ್.ಕೆ. ವದ್ನಾಳ್, ಡಾ.ಎಸ್.ಹೆಚ್. ಪವಾರ್, ಎಂ.ಎ. ಮಳಗಾವಿ, ಬಿ.ಎಂ. ಮುಲ್ಲಾ, ಯು.ಎನ್. ಪಾಟೀಲ್, ಎಸ್.ಕೆ. ಉಪ್ಪಿನಬೆಟಗೇರಿ, ಪಿ.ಬಿ. ರಜಪುತ್ ಇದ್ದರು.