ಸಾರಾಂಶ
ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆ ನಿಯಂತ್ರಿಸಬೇಕು । 31 ರಿಂದ ಮತ್ತೆ ಸರಣಿ ರಜೆ,
ಕನ್ನಡಪ್ರಭ ವಾರ್ತೆ , ಚಿಕ್ಕಮಗಳೂರುಗಿರಿ ಪ್ರದೇಶದಲ್ಲಿ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಪರಿಸರವಾದಿಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಪ್ರವಾಸಿ ನಿಯಂತ್ರಣ ವ್ಯವಸ್ಥೆಯನ್ನು ಈಗಾಗಲೇ ರೂಪಿಸಿರುವ ನೀತಿಗನುಗುಣವಾಗಿ ಜಾರಿಗೊಳಿಸಬೇಕೆಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ್, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಅತ್ಯಂತ ಸೂಕ್ಷ್ಮ ಪ್ರದೇಶಗಳು ಹಾಗೂ ಪ್ರವಾಸಿ ಆಕರ್ಷಣೆಯ ಸ್ಥಳಗಳೂ ಆದ ಪಶ್ಚಿಮಘಟ್ಟದ ಗಿರಿ ಪಂಕ್ತಿ ಮತ್ತೆ ಪ್ರವಾಸಿ ವಾಹನ ಹಾಗೂ ಜನದಟ್ಟಣೆಯಿಂದ ಬಳಲುತ್ತಿದ್ದರೂ ಸರ್ಕಾರ ಮೌನವಾಗಿದೆ. ಈ ತಿಂಗಳಲ್ಲಿ ದಸರಾ ಹಬ್ಬದ ರಜೆ ಜೊತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಮೂರು ದಿನಗಳ ಕಾಲ ರಜೆ ಇದ್ದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಗಿರಿ ಪ್ರದೇಶ ಮತ್ತು ಜಿಲ್ಲೆಯ ದೇವರಮನೆ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಉಂಟಾದ ಕಿಕ್ಕಿರಿದ ಜನಸಂದಣಿ ಹಾಗೂ ವಾಹನ ದಟ್ಟಣೆಯಿಂದ ಈ ಸೂಕ್ಷ್ಮ ಪ್ರದೇಶಗಳು ಬಳಲಿದರೆ ಸ್ಥಳೀಯ ಜನಜೀವನದ ಮೇಲೂ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ.ಮುಳ್ಳಯ್ಯನಗಿರಿ ಸೇರಿದಂತೆ ಈ ಬೆಟ್ಟ ಶ್ರೇಣಿಗೆ ಅಂದು ದಿನವೊಂದಕ್ಕೆ ಬಂದ ವಾಹನಗಳ ಸಂಖ್ಯೆ ಅಂದಾಜು 2 ಸಾವಿರ. ಜಿಲ್ಲಾಡಳಿತ ಈ ಹಿಂದೆ ಪ್ರವಾಸಿ ತಾಣದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಆನ್ಲೈನ್ ಬುಕ್ಕಿಂಗ್ ಮೂಲಕ ಪ್ರವಾಸಿಗರು ಹಾಗೂ ವಾಹನಗಳು ಕಿಕ್ಕಿರಿದು ಸೇರುವುದನ್ನು ತಡೆದು ದಟ್ಟಣೆ ಮತ್ತು ಈ ಪ್ರದೇಶದ ಮೇಲಾಗುವ ಒತ್ತಡ ಕಡಿತಗೊಳಿಸಲು ಆಲೋಚನೆ ಮಾಡಿತ್ತು. ಆದರೆ, ಅದನ್ನು ಕಾರ್ಯ ಗತಗೊಳಿಸುವ ಯಾವ ಸೂಚನೆಯೂ ಈವರೆಗೂ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಆನ್ಲೈನ್ ಬುಕ್ಕಿಂಗ್ ಜೊತೆಗೆ ಹೊರಗಿನಿಂದ ಬರುವ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸುವುದು ಹಾಗೂ ಆ ಸ್ಥಳ ದಿಂದ ಮಿನಿ ಬಸ್ ಮತ್ತು ಸರ್ಕಾರದಿಂದ ನೋಂದಾಯಿತ ಜೀಪ್ಗಳಲ್ಲಿ ತೆರಳುವ ವ್ಯವಸ್ಥೆ ಮಾಡುವ ಮೂಲಕ ಜನ ಹಾಗೂ ವಾಹನ ದಟ್ಟಣೆ ನಿಯಂತ್ರಿಸುವುದಾಗಿ ತಿಳಿಸಿತ್ತು. ಆದರೆ, ಈ ಪರಿಹಾರಗಳಲ್ಲಿ ಯಾವುದೂ ಈವರೆಗೂ ಕಾರ್ಯಗತವಾಗಿಲ್ಲ.ಈ ಸೂಕ್ಷ್ಮ ಪ್ರದೇಶಗಳಲ್ಲಿ ಜನ, ವಾಹನ ದಟ್ಟಣೆ ಜೊತೆಗೆ ಎಲ್ಲೆಂದರಲ್ಲಿ ಸಣ್ಣ ಗೂಡಂಗಡಿಗಳು ತಲೆಯೆತ್ತುತ್ತಿದ್ದು, ಜೊತೆಗೆ ಪ್ರವಾಸಿಗರು ಹಾಕುವ ಘನತ್ಯಾಜ್ಯದ ಪ್ರಮಾಣ ಅಧಿಕವಾಗಿ ಈ ಹಸಿರು ಪರಿಸರ ಹಾಳುಗೆಡವುತ್ತಿವೆ. ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಆಗುತ್ತಿಲ್ಲ. ಅದನ್ನು ನಿಯಂತ್ರಿಸುವ ಅಥವಾ ತಡೆಗಟ್ಟುವ ಕೆಲಸವೂ ಕಂಡು ಬರುತ್ತಿಲ್ಲ. ಈ ಬೆಟ್ಟ ಪ್ರದೇಶಗಳು ಹಾಗೂ ಪ್ರಕೃತಿ ಸೌಂದರ್ಯದ ತಾಣಗಳು ಕೇವಲ ನೋಡುಗರಿಗೆ ಸಂತೋಷ ನೀಡುವ ಪ್ರದೇಶಗಳು ಮಾತ್ರವಲ್ಲ. ಈ ಪ್ರದೇಶಗಳಲ್ಲಿ ಸೂಕ್ಷ್ಮ ಸಸ್ಯಗಳಿಂದ ಹಿಡಿದು ವನ್ಯ ಪ್ರಾಣಿಗಳ ಓಡಾಟವೂ ಇದೆ. ಇಲ್ಲಿ ಪ್ಲಾಸ್ಟಿಕ್ ಹಾವಳಿ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳು, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ವಿಪರೀತವಾಗಿ ಇದು ಪರಿಸರಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ನೀರಿನ ಮೂಲಗಳನ್ನು ಹಾಳು ಗೆಡವುತ್ತಿದೆ. ಜನ, ವಾಹನ ದಟ್ಟಣೆ ಮಿತಿಮೀರಿ ಈಗಾಗಲೇ ಹಲವು ರೀತಿ ಹೊಸ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ಜಾಸ್ತಿಯಾದಂತೆ ಈ ಪ್ರದೇಶಕ್ಕೆ ಒತ್ತಾಗಿರುವ ಖಾಸಗಿ ಜಾಗಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಇನ್ನು ಕೆಲವು ಕಡೆ ಹಸಿರನ್ನು ಧ್ವಂಸಗೊಳಿಸಿ ಆ ಪ್ರದೇಶವನ್ನು ವಸತಿ ಸ್ಥಳವಾಗಿ ಮಾರ್ಪಡಿಸಿ ಕೆಲವು ಸಂದರ್ಭದಲ್ಲಿ ಅದನ್ನು ಮಾರಾಟ ಮಾಡಿರುವ ಪ್ರಕರಣ ನಡೆಯುತ್ತಿವೆ.ಈ ತಿಂಗಳ ಅಕ್ಟೋಬರ್ 31 ರಿಂದ ನವೆಂಬರ್ 3 ರವರೆಗೂ ಸಾರ್ವತ್ರಿಕ ರಜಾ ದಿನಗಳು ಬರುವುದರಿಂದ ಮತ್ತೆ ಈ ಪ್ರದೇಶಗಳಲ್ಲಿ ಸಾವಿರಾರು ಜನ ಹಾಗೂ ವಾಹನಗಳ ಹಾವಳಿ ಹೆಚ್ಚಾಗುವುದು ಖಚಿತವಾಗಿದೆ. ಹಾಗಾಗಿ ಜಿಲ್ಲಾಡಳಿತ ತಕ್ಷಣ ಪ್ರವಾಸಿಗರನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.18 ಕೆಸಿಕೆಎಂ 2ಮುಳ್ಳಯ್ಯನಗಿರಿ ಪ್ರದೇಶದಲ್ಲಿ ನಿಂತಿರುವ ಪ್ರವಾಸಿಗರ ವಾಹನಗಳು.