ಗುಂಡ್ಲುಪೇಟೆ ತಾಲೂಕು ಆಡಳಿತದಿಂದ ಮಹಿಳಾ ದಿನಾಚರಣೆ । ಟಿಎಲ್‌ಎಂ ಮೇಳ ಉದ್ಘಾಟಿಸಿ ಶಾಸಕ ಕರೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪ್ರಗತಿ ಸಾಧಿಸುತ್ತಿದ್ದು, ಆದರೆ ಮಹಿಳೆಯರಿಗೆ ಸಮಾನ ಹಕ್ಕು ಕೊಡಿಸುವ ಕೆಲಸ ಆಗಬೇಕು ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಮತ್ತು ತಾಪಂ, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ತಾಲೂಕು ಮಹಿಳಾ ಒಕ್ಕೂಟ ಮತ್ತು ತಾಲೂಕು ಅಂಗನವಾಡಿ ನೌಕರರ ಸಂಘದ ಸಹಯೋಗದಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಟಿಎಲ್‌ಎಂ ಮೇಳ ಉದ್ಘಾಟಿಸಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪ್ರಸ್ತುತ ಮಹಿಳೆಯರು ಸ್ವಾವಲಂಬಿಯಾಗುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಆದರೆ ಸಮಾನ ಹಕ್ಕು ಸಿಗುತ್ತಿಲ್ಲ ಎಂಬ ಕೊರಗೂ ಇದೆ. ಸಮಾನ ಹಕ್ಕು ಕೊಡಿಸುವ ಕೆಲಸ ಸರ್ಕಾರಗಳು ಮಾಡಬೇಕಿದೆ ಎಂದರು.

ದೊಡ್ಡ ಶಕ್ತಿ:

ಪುರುಷರ ಯಶಸ್ಸಿನ ಹಿಂದೆ ಮಹಿಳೆಯರು ಇರುವುದೇ ಪುರುಷರ ಪ್ರಗತಿಗೆ ದೊಡ್ಡ ಶಕ್ತಿ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ದಿ। ಕೆ.ಎಸ್. ನಾಗರತ್ನಮ್ಮ ಸಾಧನೆಯೇನು ಕಡಿಮೆಯೇನಲ್ಲ. ಶಾಸಕಿ, ಸಚಿವ, ವಿಪಕ್ಷ ನಾಯಕಿ, ಸಭಾಪತಿ ಹುದ್ದೆ ಅಲಂಕರಿಸಿದ್ದಾರೆ. ಇದು ನಮ್ಮೆಲ್ಲರ ಹೆಮ್ಮೆ ಎಂದರು.

ಮಹಿಳೆಯರು ಸಂಸಾರದ ಹೊಣೆ ಜೊತೆಗೆ ಮಕ್ಕಳ ಲಾಲನೆ, ಪಾಲನೆ ಮಾಡುತ್ತಿದ್ದಾರೆ. ಪ್ರಸ್ತುತ ಮಹಿಳೆಯರು ಹೆಚ್ಚು ಸಕ್ರಿಯರಾಗಿದ್ದಾರೆ. ಮಹಿಳೆಯರು ತನ್ನಷ್ಟಕ್ಕೆ ತಾನೆ ಸ್ವಾವಲಂಬಿಗಳಾಗುತ್ತಿದ್ದಾರೆ. ಇದು ಸಂತಸದ ವಿಷಯ ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಮಕ್ಕಳ ಹಾಗೂ ಪುರುಷರ ಜೀವನ ರೂಪಿಸುವಲ್ಲಿಯೂ ಮಹಿಳೆಯರು ಪಾತ್ರ ಅಪಾರ. ಸ್ತ್ರೀ ಶಕ್ತಿ ಹಾಗೂ ಮಹಿಳಾ ಸಂಘಟನೆಗಳು ಸಾಮರಸ್ಯದಿಂದ ಇದ್ದರೆ ಮತ್ತಷ್ಟು ಪ್ರಗತಿ ಸಾಧಿಸಬಹುದಾಗಿದೆ ಎಂದರು.

---

೨೧ಕ್ಕೆ ಬನ್ನಿ: ಶಾಸಕ

ಏ.೨೧ಕ್ಕೆ ಗುಂಡ್ಲುಪೇಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಅಂದಿನ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು ಎಂದು ಮನವಿ ಮಾಡಿದರು.ಚಾಮರಾಜನಗರ ಸಮತಾ ಸೊಸೈಟಿ ಅಧ್ಯಕ್ಷರಾದ ದೀಪಾ ಬುದ್ಧೆ ಮುಖ್ಯ ಭಾಷಣ ಮಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ಹೇಮಾವತಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ದ್ರಾಕ್ಷಾಯಣಮ್ಮ, ಉಪಾಧ್ಯಕ್ಷೆ ನಾಗಮಲ್ಲಮ್ಮ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ. ಗುರುಮಲ್ಲಮ್ಮ, ಉಪಾಧ್ಯಕ್ಷೆ ಮಂಜುಳ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾಪತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರು ಹಾಗೂ ನೂರಾರು ಮಹಿಳೆಯರು ಇದ್ದರು.

--

ಬಾಕ್ಸ್‌...)))

ಅಂತಾರಾಷ್ಟ್ರೀಯ ಮಹಿಳಾ

ದಿನಾಚರಣೆಗೂ ಗಣ್ಯರು ಗೈರು

ಮಹಿಳೆಯರು ಬಗ್ಗೆ ಸಭೆ, ಸಮಾರಂಭದಲ್ಲಿ ಬೊಬ್ಬೆ ಹಾಕುವ ಸಚಿವ, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಆಹ್ವಾನ ಪತ್ರಿಕೆಯಲ್ಲಿದ್ದ ಬಹುತೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗೈರಾಗಿದ್ದರು.

ಮಹಿಳಾ ದಿನಾಚರಣೆ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌, ಮುಖ್ಯ ಅತಿಥಿಗಳಾಗಬೇಕಿದ್ದ ಸಂಸದ ಸುನೀಲ್‌ ಬೋಸ್‌, ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಎರ್‌. ಕೃಷ್ಣಮೂರ್ತಿ, ಎಂ.ಆರ್‌. ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕೆ. ವಿವೇಕಾನಂದ, ಕಾಡ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಪುರಸಭೆ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ, ತಾಪಂ ಆಡಾಳಿತಾಧಿಕಾರಿ ಸಿ.ಬಸವರಾಜು, ಬಾಲ ನ್ಯಾಯ ಮಂಡಳಿ ಸದಸ್ಯೆ ಸರಸ್ವತಿ ಎನ್.ಎಂ. ತಹಸೀಲ್ದಾರ್‌ ಎಂ.ಎಸ್. ತನ್ಮಯ್‌, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗಂ, ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಗೈರಾಗಿದ್ದರು.---೭ಜಿಪಿಟಿ೨

ಗುಂಡ್ಲುಪೇಟೆ ಗುರುಭವನದಲ್ಲಿ ಏರ್ಪಡಿಸಿದ್ದ ಟಿಎಲ್‌ಎಂ ಮೇಳವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.