ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯ ಸರ್ಕಾರ ಪರವಾನಗಿ ಭೂಮಾಪಕರ ಹೆಸರಿನಲ್ಲಿ ರೈತರಿಂದ ಕೊಟ್ಯಂತರ ಶುಲ್ಕ ಪಡೆದುಕೊಂಡರೂ ನಮ್ಮನ್ನು ೨೬ ವರ್ಷಗಳಿಂದ ದುಡಿಸಿಕೊಂಡು ಅನ್ಯಾಯ ಮಾಡಿಕೊಂಡು ಬರುತ್ತಿದೆ. ಎಂದು ತಾಲೂಕು ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ಡಿ.ನಾರಾಯಣ ರಾಜು ಆರೋಪಿಸಿದರು.ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ತಾಲೂಕು ಪರವಾನಗಿ ಭೂಮಾಪಕರ ಸಂಘದ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ರೈತರಿಂದ ಕ್ರಯ,ದಾನ, ಹದ್ದುಬಸ್ತು, ತತ್ಕಾಲ್ ಪೋಡಿ ಸೇರಿದಂತೆ ಹಲವು ಪ್ರಕರಣಗಳಿಗೆ ಭೂಮಾಪನಾ ಕಾರ್ಯ ನಿರ್ವಹಿಸಲು ರೈತರಿಂದ ಸಾವಿರಾರು ರು. ಶುಲ್ಕವನ್ನು ಪರವಾನಗಿ ಭೂಮಾಪಕರಿಗೆ ನೀಡಬೇಕೆಂದು ವಸೂಲು ಮಾಡುತ್ತಿದೆ. ನಮಗೆ ಅದರಲ್ಲಿ ಕಾಲು ಭಾಗ ಮಾತ್ರ ನೀಡಿ ಮುಕ್ಕಾಲು ಭಾಗ ಸರ್ಕಾರ ಇಟ್ಟುಕೊಳ್ಳುತ್ತಿದೆ ಎಂದು ತಿಳಿಸಿದರು.ರೈತರ ಜಮೀನಿನ ಹತ್ತಿರದ ಪ್ರಯಾಣ ದರವನ್ನು ನಾವೇ ಭರಸಿಕೊಳ್ಳಬೇಕು. ನಮಗೆ ಯಾವುದೇ ಭದ್ರತೆ, ಸೌಲಭ್ಯ ಇಲ್ಲ ಈ ೨೬ ವರ್ಷಗಳ ಅನ್ಯಾಯದ ವಿರುದ್ಧ ನಾವು ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದು ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯ ಒದಗಿಸಿಸುವ ಭರವಸೆ ನೀಡಿದ್ದರು. ಅದು ಇದವರೆಗೂ ಈಡೇರಿಲ್ಲ. ನಮ್ಮ ಬೇಡಿಕೆ ಈಡೇರಿಸದ್ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.ಪರವಾಗಿ ಭೂಮಾಪಕ ದ್ವಾರಕನಾಥ್ ಮಾತನಾಡಿ, ಸರ್ಕಾರದ ಮಹತ್ವ ಭೂಮಾಪಕನಾ ಯೋಜನೆಗಳನ್ನ ಬಹುತೇಕ ಕಾರ್ಯನಿರ್ವಹಿಸಿ ಯಶಸ್ವಿಗೋಳಿಸುತ್ತಿರುವುದು ಪರವಾನಗಿ ಭೂಮಾಪಕರು, ದುರದೃಷ್ಟವೇನೆಂದರೆ ಆ ಕೆಲಸದ ಹಣವನ್ನು ಇಲ್ಲಿವರೆಗೂ ನಮಗೆ ನೀಡಿಲ್ಲ. ಸರ್ಕಾರದ ಇಂತಹ ಧೋರಣೆಯಿಂದಾಗಿ ನಾವು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗುತ್ತಿದೆ. ಇದರೊಂದಿಗೆ ನಮಗೆ ಯಾವುದೇ ಭತ್ಯೆ ನೀಡದೆ ಬೇರೆ ತಾಲೂಕುಗಳಿಗೂ ಕೆಲಸ ನಿರ್ವಹಿಸಲು ಏಕಾಏಕಿ ಹಾಕುತ್ತಿದ್ದಾರೆ. ಅದರ ಕೆಲಸದ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಇದು ಪರವಾನಗಿ ಭೂಮಾಪಕರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ತಿಳಿಸಿದರು.ಪರವಾನಗಿ ಭೂಮಾಪಕ ಎಸ್,ನಂಜುಡಾರಾಧ್ಯ ಮಾತನಾಡಿ, ಭೂಮಾಪನಾ ಕೆಲಸಗಳಲ್ಲಿ ರೈತರಿಗೆ ತಿಂಗಳಿನಿಂದ ಆಗುತ್ತಿರುವ ತೊಂದರೆಗೆ ಸರ್ಕಾರವೇ ಕಾರಣ, ನಮಗೆ ವಯಸ್ಸಾಗುತ್ತಾ ಬರುತ್ತಿದೆ. ನಮ್ಮ ಹಲವು ಕೆಲಸದ ವೇತನ ಬಾಕಿ ಇದೆ.ನಮಗೆ ಜೀವನ ಭದ್ರತೆ ಇಲ್ಲ. ಈ ಕೆಲಸ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಮ್ಮ ಹೆಸರಿನಲ್ಲಿ ರೈತರಿಂದ ಪಡೆದಿರುವ ನೂರಾರು ಕೋಟಿ ಶುಲ್ಕ ಸರ್ಕಾರದ ಬಳಿ ಇದೆ. ದುಯಮಾಡಿ ನಮಗೆ ವೇತನ ನಿಗದಿ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪರವಾನಗಿ ಭೂಮಾಪಕರಾದ ರಘು ಎಚ್, ಮಂಜುನಾಥ ಡಿ.ಎಲ್. ಸುಮ, ಪರಶುರಾಮ್, ನರಸರಾಜು, ನಾಗಭೂಷಣ್, ವೆಂಕಟೇಶಮೂರ್ತಿ, ವಸಂತಕುಮಾರ್, ಭರತ್, ಪ್ರಶಾಂತ್ ಸೇರಿದಂತೆ ಇತರರು ಹಾಜರಿದ್ದರು.