ಮಗನ ಟಿಕೇಟ್ ಗಾಗಿ ಈಶ್ವರಪ್ಪ ಕೊಲ್ಲೂರಿನಲ್ಲಿ ವಿಶೇಷ ಪೂಜೆ

| Published : Mar 13 2024, 02:12 AM IST

ಸಾರಾಂಶ

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿದರು. ಮಗನಿಗೆ ಲೋಕಸಭಾ ಟಿಕೇಟ್‌ ಸಿಗುವಂತೆ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳಕ್ಕೆ ಭೇಟಿ ನೀಡಿ, ಮಗನಿಗೆ ಲೋಕಸಭೆ ಟಿಕೇಟು ಸಿಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.ಮೊದಲು ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ವೀರಭದ್ರ ದೇವರಿಗೆ ಕಾಯಿ ಸಮರ್ಪಿಸಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ನಾನು ಯಾವಾಗಲೂ ಕೊಲ್ಲೂರಿಗೆ ಆಗಮಿಸಿ‌ ತಾಯಿಯ ದರ್ಶನ ಪಡೆಯುತ್ತಿರುತ್ತೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಕಾಂತೇಶ್ ಹಾವೇರಿಯಿಂದ ಸ್ಪರ್ಧೆ ಮಾಡಬೇಕು ಎಂದು ಬಯಸಿದ್ದಾನೆ. ಈ ಬಗ್ಗೆ ಮೂಕಾಂಬಿಕೆಯ ಬಳಿ ಪೂಜೆ ಮಾಡಿ ಬೇಡಿಕೊಂಡಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಪ್ರಾರ್ಥಿಸಿದ್ದೇನೆ. ಕಾಂತೇಶ್ ಗೆ ಟಿಕೆಟ್ ಸಿಗುತ್ತದೆ, ಆತ ಗೆಲ್ಲುತ್ತಾನೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಜಯ ಪಡೆದು ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಚಾರಗಳ ಬಗ್ಗೆ ಇಲ್ಲಿ ನಾನು ಮಾತನಾಡುವುದಿಲ್ಲ. ದೇವಸ್ಥಾನದಲ್ಲಿ ಒಳ್ಳೆಯ ವಿಚಾರಗಳನ್ನು ಮಾತನಾಡಲು ಇಷ್ಟಪಡುತ್ತೇನೆ. ಕಾಂತೇಶ್ ಗೆ ಟಿಕೆಟ್ ಸಿಗುತ್ತೆ ಅವನು ಚುನಾವಣೆಯಲ್ಲಿ ಗೆಲ್ಲುತ್ತಾನೆ, ಮೋದಿ ಪ್ರಧಾನಿ ಆಗಲಿದ್ದಾರೆ ಎಂದರು. ಜೊತೆಗೆ ಇನ್ನೊಬ್ಬ ಮಗನಿಗೂ ಶೀಘ್ರ ಮದುವೆಯಾಗಲಿ ಎಂದೂ ದೇವಿಯಲ್ಲಿ ಬೇಡಿಕೊಂಡಿದ್ದೇನೆ, ಮದುವೆ ಆದಲ್ಲಿ ದೇವಿಗೆ ಸೇವೆ ನೀಡುತ್ತೇನೆ ಎಂದು ಹರಕೆ ಹೊತ್ತಿದ್ದೇನೆ ಎಂದೂ ಹೇಳಿದರು.