ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಷ್ಟ್ರನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ಚಿತ್ರದುರ್ಗ ನಗರದಲ್ಲಿನ ನಿವಾಸವ 82 ಲಕ್ಷ ರುಪಾಯಿ ಅನುಾದನಲ್ಲಿ ನವೀಕರಣ ಮಾಡಲಾಗುವುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.ನಗರದಲ್ಲಿ ಮಂಗಳವಾರ ಎಸ್.ನಿಜಲಿಂಗಪ್ಪನವರ ನಿವಾಸ ಹಾಗೂ ತಾಲೂಕಿನ ಸೀಬಾರದ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ಗೆ ಭೇಟಿ ನೀಡಿ, ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಜಲಿಂಗಪ್ಪ ಅವರ ನಿವಾಸ ಖರೀದಿಗೆ ಸರ್ಕಾರ 5 ಕೋಟಿ ರು. ಅನುದಾನ ನೀಡಿತ್ತು. ಇದರಲ್ಲಿ 4.18 ಕೋಟಿ ರು.ಗೆ ನಿವಾಸವನ್ನು ಖರೀದಿಸಲಾಗಿದ್ದು, ಉಳಿದ 82 ಲಕ್ಷ ಅನುದಾನದಲ್ಲಿ ಮನೆಯ ನವೀಕರಣಗೊಳಿಸಿ, ವಸ್ತುಸಂಗ್ರಹಾಲಯ ಆಗಿ ಮಾರ್ಪಡಿಸಲಾಗುವುದು ಎಂದರು.
ರಾಷ್ಟ್ರನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಎಸ್. ನಿಜಲಿಂಗಪ್ಪನವರ ಕೊಡುಗೆ ಅಪಾರವಾದುದು. ಎಸ್.ನಿಜಲಿಂಗಪ್ಪನವರು ಹುಟ್ಟಿ ಬೆಳೆದು, ಬದುಕಿ ಬಾಳಿದ ನಿವಾಸಕ್ಕೆ ಬೆಲೆ ಕಟ್ಟಲಾಗದು. ಅವರ ನಿವಾಸ ದೇವರ ಗುಡಿಗೆ ಸಮಾನವಾದುದು. ಹಿರಿಯ ಮುಖಂಡರಾದ ಹನುಮಂತಪ್ಪ ಹಾಗೂ ಎಸ್.ನಿಜಲಿಂಗಪ್ಪನವರ ಮಗ ಕಿರಣ್ ಶಂಕರ್ ಟ್ರಸ್ಟ್ ಸ್ಥಾಪಿಸಿ, ಉತ್ತಮ ರೀತಿಯಲ್ಲಿ ಸ್ಮಾರಕವನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಮಾರಕದ ಮಾದರಿಯಲ್ಲಿ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡುವ ದೃಷ್ಟಿಯಿಂದ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿ ಕೂಡ ಉತ್ಸುಕತೆಯಿಂದ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಕೂಡ ಈ ಕುರಿತಂತೆ ಸೂಚನೆ ನೀಡಿದ್ದೇನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ನಾಮಕರಣದ 50ನೇ ವರ್ಷಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಗಿದೆ. ಇದರ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.ಕನ್ನಡ ಪರ ಸಂಘಟನೆಗಳು ದುರ್ಗೋತ್ಸವ ಆಚರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ರೈತರು ಸಂತಸದಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ಮಾಡುವುದು ತಪ್ಪಲ್ಲ. ದುರ್ಗೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಿದರೆ ನಿಶ್ವಿತವಾಗಿ ದುರ್ಗೋತ್ಸವ ಆಚರಣೆ ಮಾಡಲಾಗುವುದು ಎಂದರು.
ಸರ್ಕಾರ ಮಠಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿಲ್ಲ. ನಿಯಮಾನುಸಾರ ಸರ್ಕಾರ ಶೇ.25 ಹಣವನ್ನು ಮೀಸಲಿರಿಸಿ ಅನುದಾನ ಘೋಷಿಸಿಬೇಕು. ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು 5 ಕೋಟಿ ರು. ನೀಡಿ, ಕಂಪನಿ ನೋಂದಣಿ ಕಾಯ್ದೆಯಡಿ ದೆಹಲಿಯಲ್ಲಿ ನೋಂದಣಿ ಮಾಡಿಸಲಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಎಸ್. ನಿಜಲಿಂಗಪ್ಪ ನವರ ಸ್ಮಾರಕದ ಆವರಣದಲ್ಲಿರುವ ಕೊಠಡಿಗಳಲ್ಲಿ ಅಳವಡಿಸಿರುವ ನಿಜಲಿಂಗಪ್ಪನವರ ಕುರಿತಾದ ಫೋಟೋ ಗ್ಯಾಲರಿ ಹಾಗೂ ಗ್ರಂಥಾಲಯವನ್ನು ಸಚಿವರು ವೀಕ್ಷಿಸಿದರು. ಅಲ್ಲದೆ ಸ್ಮಾರಕದ ಬಳಿ ಇರಿಸಲಾಗಿದ್ದ ಎಸ್. ನಿಜಲಿಂಗಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ನ ಗೌರವಾಧ್ಯಕ್ಷ ಎಚ್.ಹನುಮಂತಪ್ಪ, ಗೌರವ ಕಾರ್ಯದರ್ಶಿ ಕಿರಣ್ ಶಂಕರ್, ಟ್ರಸ್ಟಿಗಳಾದ ಮೋಹನ್ ಕುಮಾರ್ ಕೊಂಡಜ್ಜಿ, ಕೆಇಬಿ ಷಣ್ಮುಖಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮತ್ತಿತರರು ಇದ್ದರು.