ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆಯಡಿ ದೊರೆಯುತ್ತಿರುವ ಮಾಸಿಕ ಎರಡು ಸಾವಿರ ರುಪಾಯಿ ಸದ್ಬಳಕೆ ಮಾಡಿಕೊಂಡಿರುವ ಪಟ್ಟಣದ ಮೂವರು ಮಹಿಳೆಯರು ರೊಟ್ಟಿ ಕೇಂದ್ರ ಆರಂಭಿಸಿ ಕೇಂದ್ರಕ್ಕೆ "ಗೃಹಲಕ್ಷ್ಮೀ ರೊಟ್ಟಿ ಕೇಂದ್ರ " ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು. ಪಟ್ಟಣದ ನಿವಾಸಿಗಳಾದ ಮಕ್ತುಮ್ಬಿ ಕೊಪ್ಪದ, ಸಾಜನಬಿ ದಾದಿಬಾಯಿ, ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ಲಭಿಸಿದ ಆರ್ಥಿಕ ನೆರವನ್ನು ಉಳಿತಾಯ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ರೊಟ್ಟಿ ಮಿಷನ್ ಖರೀದಿಸಿ ಸ್ವಯಂ ಉದ್ಯೋಗ ಆರಂಭಿಸುವಲ್ಲಿ ಮುಂದಾಗಿದ್ದಾರೆ.

ಈ ರೊಟ್ಟಿ ಉದ್ಯಮ ಕಟ್ಟಿಕೊಳ್ಳಲು 29 ಕಂತುಗಳ ಪೈಕಿ ಒಟ್ಟು 58 ಸಾವಿರದಂತೆ ಮೂರು ಜನ ಹಣ ಹೂಡಿಕೆಯ ಜತೆಗೆ ಸ್ವಂತ ಹಣ ಜೋಡಿಸಿಕೊಂಡು ₹2ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ರೊಟ್ಟಿ ತಯಾರಿಕಾ ಮೀಷನ್ ಅಳವಡಿಸಿಕೊಂಡು ಉದ್ಯಮ ಆರಂಭಿಸುವ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಈ ರೊಟ್ಟಿ ಮೀಷನ್ ದಿಂದ ಪ್ರತಿನಿತ್ಯವೂ ತಯಾರಾಗುವ ರೊಟ್ಟಿ ಪಟ್ಟಣದಲ್ಲಿರುವ ಹೋಟೆಲ್, ಡಾಬಾ, ಖಾನಾವಳಿ, ಸಭೆ ಸಮಾರಂಭಕ್ಕೆ ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದ್ದು, ಮಹಿಳೆಯರಿಗೆ ಸ್ಥಿರ ಆದಾಯದೊಂದಿಗೆ ಸ್ವಾವಲಂಬಿ ಬದುಕಿನ ಹೆಜ್ಜೆಯಾಗಿದೆ.


ಗಣ್ಯರಿಂದ ಚಾಲನೆ:ಕುಷ್ಟಗಿ ಪಟ್ಟಣದಲ್ಲಿ ಮೂವರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣದಿಂದ ಸ್ಥಾಪಿಸಿರುವ ಗೃಹಲಕ್ಷ್ಮೀ ರೊಟ್ಟಿ ಕೇಂದ್ರವನ್ನು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಕಾಂಗ್ರೆಸ್ ಯುವಮುಖಂಡ ದೊಡ್ಡಬಸನಗೌಡ ಬಯ್ಯಾಪೂರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಗ್ಯಾರಂಟಿ ಸಮಿತಿಯ ಸದಸ್ಯರು, ಸಿಡಿಪಿಒ ಇಲಾಖೆ ಅಧಿಕಾರಿಗಳು, ಗಣ್ಯರು ಕೇಂದ್ರ ಉದ್ಘಾಟಿಸಿದರು.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬರುವ ಎರಡು ಸಾವಿರ ಹಣ ಉಳಿತಾಯ ಮಾಡುವ ಮೂಲಕ ನಾವು ಮೂವರು ಸೇರಿಕೊಂಡು ಅಂದಾಜು ಎರಡು ಲಕ್ಷಗಳಲ್ಲಿ ರೊಟ್ಟಿ ಕೇಂದ್ರ ಆರಂಭಿಸಿದ್ದು, ಉದ್ಯಮದಲ್ಲಿ ಯಶಸ್ವಿಯಾಗುವ ಭರವಸೆಯಿದೆ ಎನ್ನುತ್ತಾರೆ ಗೃಹಲಕ್ಷ್ಮೀ ರೊಟ್ಟಿ ಕೇಂದ್ರದ ಮಹಿಳೆಯರು.

ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಜತೆಗೆ ಕುಟುಂಬದ ಆರ್ಥಿಕ ಸ್ಥೀತಿ ಸುಧಾರಣೆಯಾಗಲು ಸಹಕಾರಿಯಾಗಿದೆ. ಯೋಜನೆ ನೆರವಿನಿಂದ ಕುಷ್ಟಗಿಯಲ್ಲಿ ರೊಟ್ಟಿ ಕೇಂದ್ರ ಸ್ಥಾಪನೆ ಮಾಡಿರುವದು ಶ್ಲಾಘನೀಯವಾಗಿದೆ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಹಣ ಉದ್ಯೋಗ ಸೃಷ್ಟಿಗೆ ಬಳಸಿರುವುದು ಮಾದರಿ ಕಾರ್ಯವಾಗಿದ್ದು, ಮಹಿಳೆಯರು ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಹಣದಿಂದ ಅನೇಕ ಫಲಾನುಭವಿಗಳು ಬಟ್ಟೆ ಅಂಗಡಿ, ಹೊಲಿಗೆ ಯಂತ್ರ ವಿವಿಧ ವ್ಯಾಪಾರ ವಹಿವಾಟು ಮೂಲಕ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಕುಷ್ಟಗಿಯಲ್ಲಿ ಮೂರು ಜನ ಮಹಿಳೆಯರು ಸೇರಿಕೊಂಡು ಉದ್ಯಮ ಕಟ್ಟಿಕೊಂಡಿರುವುದು ಮಹಿಳೆಯರ ಆತ್ಮವಿಶ್ವಾಸದ ಸಂಘಟಿತ ಪ್ರಯತ್ನ ಇತರರಿಗೆ ಪ್ರೇರಣೆಯಾಗಲಿದೆ ಎಂದು ಕುಷ್ಟಗಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಫಾರೂಕ್ ಡಾಲಾಯತ್ ತಿಳಿಸಿದ್ದಾರೆ.