ರೇಲ್ವೆಯಲ್ಲಿ ‘ರೈಲ್ ಮದದ್ ವಾರ್ ರೂಮ್’ ಸ್ಥಾಪನೆ: ಶಿಲ್ಪಿ ಅಗರ್ವಾಲ್

| Published : Jun 21 2024, 01:05 AM IST

ಸಾರಾಂಶ

ವಿಭಾಗೀಯ ರೇಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ನೇತೃತ್ವದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ‘ರೈಲ್ ಮದದ್ ವಾರ್ ರೂಮ್’ ಸ್ಥಾಪನೆ, ನಿಯಮಿತ ತಪಾಸಣಾ ವ್ಯವಸ್ಥೆ, ಇತ್ಯಾದಿ ಕ್ರಮಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ಹೊಸದಾಗಿ ಪರಿಚಯಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಭಾಗೀಯ ರೇಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ನೇತೃತ್ವದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ‘ರೈಲ್ ಮದದ್ ವಾರ್ ರೂಮ್’ ಸ್ಥಾಪನೆ, ನಿಯಮಿತ ತಪಾಸಣಾ ವ್ಯವಸ್ಥೆ, ಇತ್ಯಾದಿ ಕ್ರಮಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ಹೊಸದಾಗಿ ಪರಿಚಯಿಸಿದೆ.

ಈ ಉಪಕ್ರಮಗಳು ನೈಜ ಸಮಯದಲ್ಲಿ ಪ್ರಯಾಣಿಕರ ಕುಂದುಕೊರತೆ ಪರಿಹರಿಸಲು ಮತ್ತು ಕಾಯ್ದಿರಿಸಿದ ಕೋಚ್‌ಗಳಲ್ಲಿ ಪ್ರಯಾಣಿಸಲು ಮಾನ್ಯತೆ ಇಲ್ಲದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಂದ ಕಾಯ್ದಿರಿಸಿದ ಕೋಚ್‌ಗಳ ಮಿತಿಮೀರಿದ ದಟ್ಟಣೆಯನ್ನು ತಡೆಯಲು ಉಪಯುಕ್ತವಾಗಿವೆ ಎಂದು ಅವರು ತಿಳಿಸಿದ್ದಾರೆ.

ವಿಭಾಗದ ‘ರೈಲ್ ಮದದ್’ ಅನ್ನು ಟೋಲ್-ಫ್ರೀ ಸಂಖ್ಯೆ 139 ಮೂಲಕ ಮತ್ತು ಆ್ಯಡ್ರಾಯ್ಡ್‌ ಮತ್ತು ಐಒಎಸ್‌ ಪ್ಲಾಟ್‌ ಫಾರ್ಮ್‌ಗಳಲ್ಲಿ ಲಭ್ಯವಿರುವ ‘ರೈಲ್ ಮದದ್’ ಅಪ್ಲಿಕೇಶನ್‌ಗಳ ಮೂಲಕ ಪ್ರಯಾಣಿಕರಿಗೆ ಲಭ್ಯವಿದೆ. ‘ಸೆಂಟರ್ ಫಾರ್ ರೈಲ್ ಇನ್ಫರ್ಮೇಷನ್ ಸಿಸ್ಟಮ್ಸ್’ ಅಭಿವೃದ್ಧಿಪಡಿಸಿರುವ ಈ ಕೇಂದ್ರೀಕೃತ ಡೇಟಾಬೇಸ್ ನೈಜ-ಸಮಯದಲ್ಲಿಯೇ ಮೇಲ್ವಿಚಾರಣೆಗೆ ಮತ್ತು ಪ್ರಯಾಣಿಕರ ದೂರುಗಳಿಗೆ ಪರಿಹಾರಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.

ವಿಭಾಗವು 2024 ರ ಏಪ್ರಿಲ್ ನಿಂದ ಜೂನ್ ವರೆಗೆ ಕಳೆದುಹೋದ ವಸ್ತುಗಳು, ಅಸಮರ್ಪಕ ವಿದ್ಯುತ್ ಉಪಕರಣಗಳು, ಕಾಯ್ದಿರಿಸಿದ ಕೋಚ್‌ಗಳಲ್ಲಿ ಅನಧಿಕೃತ ಪ್ರಯಾಣಿಕರು, ಕೋಚ್‌ಗಳು ಮತ್ತು ಶೌಚಾಲಯಗಳಲ್ಲಿನ ಆಶುಚಿತ್ವ ಮತ್ತು ಪ್ರಯಾಣಿಕರ ಸೌಕರ್ಯಗಳಲ್ಲಿನ ಕೊರತೆಗಳು, ಲಗೇಜ್ ಬುಕಿಂಗ್ ಮತ್ತು ಅಹಾರ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಂತಹ ಸಮಸ್ಯೆಗಳಿಗೆ ಸಂಬಂಧಿಸಿದ 5,132 ದೂರುಗಳನ್ನು ಸ್ವೀಕರಿಸಿದೆ.

ಮೈಸೂರು ವಿಭಾಗವು ಈ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಂಡಿರುವ ಬಗ್ಗೆ ಖಚಿತಪಡಿಸಿಕೊಂಡಿದೆ ಮತ್ತು ಕ್ರಮ ತೆಗೆದುಕೊಂಡ ವರದಿಗಳನ್ನು ಪ್ರಯಾಣಿಕರಿಗೆ ವಿಳಂಬವಿಲ್ಲದೆ ಕಳುಹಿಸಲಾಗಿದೆ.

ಈ ಸಮಯೋಚಿತ ಕ್ರಮಗಳ ಕಾರಣದಿಂದಾಗಿ, ‘ರೈಲ್ ಮದದ್ ವಾರ್ ರೂಮ್’ ನಿರ್ವಹಿಸಿದ ದೂರುಗಳಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿದ್ದು, ಜೂ.9 ರಂದು ಇದ್ದ ಸರಾಸರಿ 90 ದೂರುಗಳಿಂದ, ಜೂ. 18ರ ವೇಳೆಗೆ ಸರಾಸರಿ 38 ದೂರುಗಳಿಗೆ ಇಳಿಕೆಯಾಗಿದೆ.

ಮೈಸೂರು ವಿಭಾಗದ ಕೆಲವು ರೈಲುಗಳು ಜನದಟ್ಟಣೆಗೆ ಗುರಿಯಾಗುತ್ತವೆ ಎಂದು ಗುರುತಿಸಲಾಗಿದ್ದು, ಈ ರೈಲುಗಳಲ್ಲಿ ಈಗ ಮಾನ್ಯ ಟಿಕೆಟ್‌ ಗಳನ್ನು ಹೊಂದಿರುವ ಪ್ರಯಾಣಿಕರು ಮಾತ್ರ ಕಾಯ್ದಿರಿಸಿದ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ಖಂಡಿತಪಡಿಸಿಕೊಳ್ಳಲು ಟಿಕೆಟ್ ಪರೀಕ್ಷಕರಿಗೆ (ಟಿಟಿಇ) ಸಹಾಯ ಮಾಡಲು ನಿಗದಿಯಾದ ರೈಲ್ವೆ ಸಂರಕ್ಷಣಾ ದಳದ ಸಿಬ್ಬಂದಿಗಳನ್ನು ಹೊಂದಿದೆ.

ಪ್ರಸ್ತುತ ತಿಂಗಳ ಕೆಲ ದಿನಗಳ ಅವಧಿಯಲ್ಲಿಯೇ ಮಾನ್ಯತೆ ಇಲ್ಲದ ಟಿಕೆಟ್‌ ಗಳೊಂದಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಿದ ಸುಮಾರು 624 ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗಿದೆ ಮತ್ತು ತಪ್ಪಿತಸ್ಥರಿಂದ ರು. 3,48,770 ದಂಡವನ್ನು ಸಂಗ್ರಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಾಯ್ದಿರಿಸಿದ ಕೋಚ್‌ಗಳಲ್ಲಿ ಅನಧಿಕೃತ ಪ್ರಯಾಣಿಕರು ಪ್ರಯಾಣಿಸುವುದನ್ನು ತಡೆಯಲು ವಿಭಾಗವು ರೈಲ್ವೆ ಸಂರಕ್ಷಣಾ ದಳ (ಆರ್‌ಪಿಎಫ್‌) ಮತ್ತು ಟಿಕೆಟ್ ತಪಾಸಣೆ ಸಿಬ್ಬಂದಿಯ (ಟಿಟಿಇ) ಜಂಟಿ ತಂಡಗಳನ್ನು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಆಗಾಗೆ ಯಾದೃಚ್ಛಿಕ ತಪಾಸಣೆ ನಡೆಸಲು ನಿಯೋಜಿಸಿದೆ. ಬೇಸಿಗೆಯ ಹೆಚ್ಚಿನ ಜನದಟ್ಟಣೆ ಅವಧಿಯಲ್ಲಿ ಮೈಸೂರು ವಿಭಾಗವು, ಶೇ. 100 ಕ್ಕಿಂತ ಹೆಚ್ಚು ಜನಸಂದಣಿ ಇರುವ ವಿವಿಧ ರೈಲುಗಳಿಗೆ ಸುಮಾರು 61 ಹೆಚ್ಚುವರಿ ಕೋಚ್‌ಗಳನ್ನು ಏ. 1 ರಿಂದ ಬೇಸಿಗೆಯ ಅವಧಿಯ ಅಂತ್ಯದವರೆಗೆ ಸೇರಿಸಿದೆ. ಇದರೊಂದಿಗೆ, ಹೆಚ್ಚಿದ ಪ್ರಯಾಣಿಕರ ಸಂಖ್ಯೆಯನ್ನು ಸರಿಹೊಂದಿಸಲು ಅಜ್ಮೀರ್, ಮುಜಾಫರ್‌ಪುರ, ರಾಣಿ ಕಮಲಪತಿ ರೈಲು ನಿಲ್ದಾಣ, ಮನಮದುರೈ, ಹೈದರಾಬಾದ್, ಸಿಕಂದರಾಬಾದ್, ಬಿಜಾಪುರ, ಖುರ್ದಾ ರೋಡ್ ನಿಲ್ದಾಣ, ವಾರಣಾಸಿ, ಭುವನೇಶ್ವರ್, ವಿಜಯನಗರ ಮತ್ತು ಹುಬ್ಬಳ್ಳಿಯಂತಹ ವಿವಿಧ ಸ್ಥಳಗಳಿಗೆ 14 ವಿಶೇಷ ರೈಲುಗಳನ್ನು ಸಂಚರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಪದೇ ಪದೇ ದೂರುಗಳು ಬರುತ್ತಿದ್ದ ಅರಸೀಕೆರೆಯಂತಹ ನಿಲ್ದಾಣಗಳಿಗೆ ವಿಶೇಷ ಒತ್ತು ಸೇರಿದಂತೆ ವಿಭಾಗದಾದ್ಯಂತ ವಿಶೇಷ ಸ್ವಚ್ಛತಾ ಉಪಕ್ರಮವನ್ನು ಆರಂಭಿಸಲಾಗಿದೆ. ಈ ತರಹದ ಸಮಸ್ಯೆಗಳನ್ನು ನಿಭಾಯಿಸಲು ಟಿಕೆಟ್ ತಪಾಸಣೆ ಸಿಬ್ಬಂದಿ ಮತ್ತು ರೈಲ್ವೆ ಸಂರಕ್ಷಣಾ ದಳದ ಸಿಬ್ಬಂದಿ ಜಂಟಿ ತಂಡಗಳನ್ನು ನಿಯೋಜಿಸಲಾಗಿದ್ದು, ಇದು ಸ್ವಚ್ಛತೆಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳನ್ನು ಉಂಟುಮಾಡಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರಿಗೆ ಸುರಕ್ಷಿತ, ದಕ್ಷ ಮತ್ತು ಆರಾಮದಾಯಕ ಪ್ರಯಾಣದ ಅನುಭವಗಳನ್ನು ನೀಡಲು ಬದ್ಧವಾಗಿದೆ ಮತ್ತು ಅನಧಿಕೃತ ಪ್ರಯಾಣಿಕರ ಸವಾಲುಗಳು ಕ್ರಿಯಾತ್ಮಕವಾಗಿ ಇರುವ ಕಾರಣ, ನಿರಂತರ ಮೇಲ್ವಿಚಾರಣೆ ಮತ್ತು ಕ್ರಮಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು.