ಎಲ್ಲ ಶಾಲೆಗಳಲ್ಲಿ ಸೇವಾದಳ ಘಟಕ ಸ್ಥಾಪನೆ: ಲಕ್ಷ್ಮೀಪತಿ

| Published : Aug 13 2024, 12:59 AM IST

ಎಲ್ಲ ಶಾಲೆಗಳಲ್ಲಿ ಸೇವಾದಳ ಘಟಕ ಸ್ಥಾಪನೆ: ಲಕ್ಷ್ಮೀಪತಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ಭಾರತ ಸೇವಾದಳದ ಬೆಂಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು. ದೊಡ್ಡಬಳ್ಳಾಪುರದ ಸ್ವಾತಂತ್ರ್ಯ ದಿನಾಚರಣೆ ಸಂಬಂಧಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ಭಾರತ ಸೇವಾದಳದ ಬೆಂಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ದೊಡ್ಡಬಳ್ಳಾಪುರ ತಾಲೂಕು ಸೇವಾದಳ ಸಮಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೆರೇಡ್‌ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರೀಯತೆಯ ಭಾವನೆಯನ್ನು ಉತ್ತೇಜಿಸುವ ಮಹತ್ವದ ಕೆಲಸವನ್ನು ಸೇವಾದಳ ನಿರಂತರವಾಗಿ ಮಾಡುತ್ತ ಬರುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ದೇಶಭಕ್ತಿಯ ಚಿಂತನೆಗಳನ್ನು ಪ್ರಚೋದಿಸುವ ಸಂಕಲ್ಪ ಮಹತ್ವದ್ದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟವಾದ ಗುರಿ, ಉತ್ತಮವಾದ ಆಲೋಚನೆ, ಆತ್ಮವಿಶ್ವಾಸ ಹೊಂದಿರಬೇಕು. ಭಾರತ ಸೇವಾದಳ ಸೇವೆಗಾಗಿ ಬಾಳು ಎಂಬ ತತ್ವದ ಅಡಿ ಕಾರ್ಯನಿರ್ವಹಿಸುತ್ತಿದ್ದು, ಹೊಣೆಯಾಧಾರಿತ ಮಕ್ಕಳಾಗಿ ತಂದೆ-ತಾಯಿಯರ ಯೋಗಕ್ಷೇಮ ನೋಡಿಕೊಳ್ಳುವ ಹೊಣೆಗಾರಿಕೆ ನಿಭಾಯಿಸಬೇಕು. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ದೇಶದ ಮಹಾನ್‌ ನಾಯಕರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಸಮಿತಿಗೆ ಆಯ್ಕೆ:

ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಸಮಿತಿಗೆ ಅಧ್ಯಕ್ಷರಾಗಿ ವಕೀಲ ಆರ್.ವಿ.ಮಹೇಶ್ ಕುಮಾರ್, ಕಾರ್ಯಾಧ್ಯಕ್ಷರಾಗಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಸಿ.ಜ್ಯೋತಿಕುಮಾರ್‌ರವರನ್ನು ಅಯ್ಕೆ ಮಾಡಿರುವುದಾಗಿ ತಿಳಿಸಿದರು. ತಾಲೂಕು ಸಮಿತಿ ವತಿಯಿಂದ ಸಮವಸ್ತ್ರ ದಾನಿಗಳಾದ ಲಕ್ಷ್ಮೀಪತಿ ಹಾಗೂ ಮಹೇಶ್ ಕುಮಾರ್‌ರನ್ನು ಸನ್ಮಾನಿಸಲಾಯಿತು.

ಕೇಂದ್ರ ಸಮಿತಿ ಸದಸ್ಯರಾದ ರವಿಕುಮಾರ್, ಜಿಲ್ಲಾ ಕೋಶಾಧ್ಯಕ್ಷ ಹೊನ್ನಸಿದ್ದಪ್ಪ, ಕಾಂತರಾಜ್, ಹೊಸಕೋಟೆ ತಾಲೂಕು ಸಮಿತಿ ಅಧ್ಯಕ್ಷ ಹರೀಶ್ ಗೌಡ, ನೆಲಮಂಗಲ ತಾಲೂಕು ಅಧ್ಯಕ್ಷ ಆರ್.ಜಿ.ಬಸವರಾಜಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಮುನಿರಾಜ್, ಸುರೇಶ್‌, ಅಂಜನಮೂರ್ತಿ, ಕೆ.ವಿ.ಸ್ವಾಮಿ, ವಿ.ಸಿ.ಜ್ಯೋತಿ ಕುಮಾರ್, ಬೇಟೆಗೌಡ ದಿನಕರ್, ಕೆಂಪೇಗೌಡ, ದೊಡ್ಡಬಳಾಪುರ ತಾಲೂಕು ಸಮಿತಿಯ ಪ್ರಭಾರ ಅಧ್ಯಕ್ಷ ವೆಂಕಟೇಶ್ ಇತರರಿದ್ದರು.