ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಉದ್ದೇಶದೊಂದಿಗೆ ಸ್ಥಾಪಿತಗೊಂಡ ಎಸ್ಟಿಜಿ ವಿದ್ಯಾ ಸಂಸ್ಥೆಯ ಕನಸು ಸಕಾರಗೊಂಡಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಚಿನಕುರಳಿಯ ಎಸ್ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಚಿನ್ನದ ನಾಣ್ಯ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿನ್ನದ ನಾಣ್ಯ ವಿತರಣೆ ಮಾಡಿ ಬಳಿಕ ಮಾತನಾಡಿದರು.
ನನ್ನೂರಿನ ಜನತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ಕಂಡು ಗ್ರಾಮೀಣ ಪ್ರದೇಶದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕೊಡಿಸಬೇಕು ಎಂಬ ಉದ್ದೇಶದಿಂದ ತನ್ನ ತಂದೆ-ತಾಯಿ ಹೆಸರಿನಲ್ಲಿ ಎಸ್ ಟಿಜಿ ಶಿಕ್ಷಣ ಸಂಸ್ಥೆ ಆರಂಭಿಸಲಾಯಿತು ಎಂದರು.ಪ್ರಸ್ತುತ ಶಿಕ್ಷಣ ಸಂಸ್ಥೆಯೂ ಉತ್ತಮವಾಗಿ ಮುನ್ನಡೆಯುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುತ್ತಿದೆ. ಉತ್ತಮ ಶಿಕ್ಷಣದ ಜತೆಗೆ ವ್ಯವಸ್ಥಿತವಾದ ಹಾಸ್ಟೆಲ್ ಆರಂಭಿಸಲಾಗಿದೆ. ಈಗಾಗಲೇ ರಾಜ್ಯದ ನಾನಾ ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಶಿಕ್ಷಣಕ್ಕಾಗಿ ದಾಖಲು ಮಾಡಿಕೊಂಡಿರುವುದು ಶಾಲೆಯ ವಿಶಿಷ್ಠ್ಯತೆಯನ್ನು ಬಿಂಬಿಸುತ್ತದೆ ಎಂದರು.
ಪ್ರತಿವರ್ಷವು ಶಾಲೆಗೆ ಉತ್ತಮ ಫಲಿತಾಂಶ ದಾಖಲು ಮಾಡುವ ಮೂಲಕ ಮಕ್ಕಳು ಶಾಲೆ ಕೀರ್ತಿ ಹೆಚ್ಚಿಸಿದ್ದಾರೆ. ಜತೆಗೆ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕೊಡಿಸುವ ಉದ್ದೇಶದಿಂದ ಅಮೆರಿಕಾದ ಸಾಗಿನಾವ ವಿಶ್ವವಿದ್ಯಾಲಯದ ಜತೆಗೆ ವಿದ್ಯಾರ್ಥಿಗಳ ವಿನಿಮಯಕ್ಕೂ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಗೊಂಡ ಎಸ್ ಟಿಜಿ ಶಿಕ್ಷಣ ಸಂಸ್ಥೆಯ ಧ್ಯೇಯ, ಉದ್ದೇಶ ಈಗ ಸಕಾರಗೊಂಡಿದೆ ಎಂದು ಬಣ್ಣಿಸಿದರು.
ಸಿಇಓ ಸಿ.ಪಿ.ಶಿವರಾಜು ಮಾತನಾಡಿ, ಸಂಸ್ಥೆಯೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದೆ. ಶಾಲೆ ಆಡಳಿತ ಮಂಡಳಿ, ಉಪನ್ಯಾಸಕರ ಪರಿಶ್ರಮದಿಂದ ಪ್ರತಿವರ್ಷವು ಉತ್ತಮ ಫಲಿತಾಂಶ, ಕಳೆದ ಸಾಲಿನಲ್ಲೂ ಉತ್ತಮ ಫಲಿತಾಂಶ ತರುವಲ್ಲಿ ಶಾಲೆಯ ವಿದ್ಯಾರ್ಥಿಗಳು ಸಫಲರಾಗಿದ್ದಾರೆ ಎಂದರು.ಇದೇ ವೇಳೆ 2024-25ನೇನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿ.ಲೇಖನ ಎಂಬ ವಿದ್ಯಾರ್ಥಿನಿಗೆ ಸಿ.ಎಸ್.ಪುಟ್ಟರಾಜು ಅವರು 10 ಗ್ರಾಂ ಚಿನ್ನದ ನಾಣ್ಯ ಹಾಗೂ ದ್ವೀತಿಯ ಸ್ಥಾನಪಡೆದ ಶಶಾಂಕ್ ಟಿ. ಸಿ ಹಾಗೂ ಋತ್ವಿಕ್. ಎಸ್ ವಿದ್ಯಾರ್ಥಿಗಳಿಗೆ ತಲಾ 5 ಗ್ರಾಂ ಚಿನ್ನದ ನಾಣ್ಯ ನೀಡಿ ಗೌರವಿಸಿದರು.
ಜತೆಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 240 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.ಸಮಾರಂಭದ ನಂತರ ಭಾಗವಹಿಸಿದ 5 ಸಾವಿರಕ್ಕೂ ಅಧಿಕ ಪೋಷಕರಿಗೆ ಹೋಳಿಗೆ ಊಟ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ನಾಗಮ್ಮ ಪುಟ್ಟರಾಜು, ಎಂಐಟಿ ಸಂಸ್ಥೆ ಟ್ರಸ್ಟಿ ಚೇತನ್, ಪ್ರಾಂಶುಪಾಲರಾದ ಮಾರುತಿ, ರಘುಸ್ವಾಮಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.