ಸಾರಾಂಶ
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಯಾವುದೇ ಸಮಯದಲ್ಲಾದ್ರೂ ಅಗ್ನಿ ಅವಘಡಗಳು ಸಂಭವಿಸುವುದು ಮಾಮೂಲು. ಇಂತಹ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದರೆ ಒಂದಷ್ಟು ಹಾನಿ ಕಡಿಮೆ ಮಾಡಬಹುದು. ಆದರೆ ದೇವರಹಿಪ್ಪರಗಿ ಹಾಗೂ ಆಲಮೇಲ ಹೊಸ ತಾಲೂಕುಗಳು ರಚನೆಯಾಗಿ 12 ವರ್ಷ ಕಳೆದರೂ ಇನ್ನೂ ಇಲ್ಲಿ ಅಗ್ನಿಶಾಮಕ ಠಾಣೆಗಳೇ ಮಂಜೂರಾಗಿಲ್ಲ.
ಇದರಿಂದಾಗಿ ಮನೆ, ವಾಣಿಜ್ಯ ಸಂಕೀರ್ಣ, ಅಗ್ನಿ ಆಕಸ್ಮಿಕ ಮತ್ತಿತರ ಕಡೆಗಳಲ್ಲಿ ಅವಘಡಗಳು ಸಂಭವಿಸಿದಾಗ ಹಳೆ ತಾಲೂಕು ಕೇಂದ್ರಗಳಿಂದಲೇ ಅಗ್ನಿಶಾಮಕ ಸಿಬ್ಬಂದಿ ಬರಬೇಕು. ಸಿಂದಗಿ ತಾಲೂಕಿನಿಂದ ದೇವರಹಿಪ್ಪರಗಿ ತಾಲೂಕಿನ ಕೊನೆಯ ಹಳ್ಳಿ 90 ಕಿ.ಮೀ ದೂರದಲ್ಲಿದೆ. ಗಡಿ ಗ್ರಾಮಗಳಿಗೆ ತೆರಳಬೇಕೆಂದರೆ 80 ಕಿ.ಮೀ ದೂರ ಹೋಗಬೇಕು. ಆದ್ದರಿಂದ ಹೊಸ ತಾಲೂಕು ಕೇಂದ್ರಗಳಲ್ಲಿಯೂ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕು ಎಂಬ ಬೇಡಿಕೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇನ್ನೂ ಸ್ಪಂದಿಸಿಲ್ಲ.ಇದ್ದ ಠಾಣೆಯಲ್ಲೂ ಸಿಬ್ಬಂದಿ ಕೊರತೆ:
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಬ್ಬಿನ ಹೊಲದ ಮಧ್ಯದಲ್ಲಿರುವ ವಿದ್ಯುತ್ ಟಿಸಿಯಿಂದ ಹಾಗೂ ಆಕಸ್ಮಿಕ ಬೆಂಕಿ ಅವಘಡಗಳಿಗೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಇದನ್ನು ತಪ್ಪಿಸಲು ಇರುವ ಸಿಂದಗಿ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿಯೇ ಕಡಿಮೆ ಇದೆ. ಇದ್ದ ಸಿಬ್ಬಂದಿ ಬಳಸಿಕೊಂಡು ಅಗ್ನಿಶಮನ ಹಾಗೂ ಜನರನ್ನು ರಕ್ಷಿಸುವ ಹೊಣೆಗಾರಿಕೆ ಅಗ್ನಿಶಾಮಕ ಅಧಿಕಾರಿಗಳ ಮೇಲಿದೆ.ಸಿಂದಗಿ ಅಗ್ನಿಶಾಮಕ ಠಾಣೆಯಲ್ಲಿ ಈಗಿರುವ 15 ವರ್ಷದ ಹಳೆಯ ಅಗ್ನಿಶಾಮಕ ವಾಹನಗಳ ಬರುವ ಏಪ್ರಿಲ್ನಲ್ಲಿ ನೋಂದಣಿ ಕೊನೆಗೊಳ್ಳಲಿದೆ. ಮೊದಲೇ ವಾಹನದಲ್ಲಿ ಪಂಪ್ ವ್ಯವಸ್ಥೆ ಸರಿ ಇಲ್ಲ, ತುಂಬಾ ಹಳೆಯದಾದ ವಾಹನ ಮೂಲೆ ಸೇರಲಿದೆ. ಹಳೆಯ ವಾಹನದಿಂದ ಮೂರು ತಾಲೂಕುಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಸಮಸ್ಯೆಯಾಗುತ್ತದೆ. ಹೀಗಾಗಿ, ಪ್ರತಿ ತಾಲೂಕು ಕೇಂದ್ರಕ್ಕೆ ಹೊಸ ಅಗ್ನಿಶಾಮಕ ವಾಹನ ಹಾಗೂ ಸಿಂದಗಿ ಪಟ್ಟಣಕ್ಕೆ ಹೊಸ ವಾಹನಗಳ ಅವಶ್ಯಕತೆ ಇದೆ. ದೇವರಹಿಪ್ಪರಗಿ ತಾಲೂಕು ಕೇಂದ್ರಕ್ಕೆ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಜಾಗ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಂದಗಿ ಅಗ್ನಿಶಾಮಕ ಠಾಣೆ ಅಧಿಕಾರಿ ಪೂಜಾರಿ ಹೇಳುತ್ತಿದ್ದಾರೆ.
ದೇವರಹಿಪ್ಪರಗಿ ನೂತನ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯವಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಇಲಾಖೆಯವರಿಗೆ ಬೇಕಾದ ಜಾಗದ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಮಾಹಿತಿ ನೀಡುತ್ತೇನೆ. ರೈತರ ಹಾಗೂ ಸಾರ್ವಜನಿಕರ ತುರ್ತು ಸೇವೆಗೆ ಅಗ್ನಿಶಾಮಕ ಠಾಣೆ ಅಗತ್ಯವಿದೆ ಇಲಾಖೆಯವರು ಕೇಳಿದ ಕಡೆ ಜಾಗವನ್ನು ಒದಗಿಸಲು ಸಿದ್ಧನಿದ್ದೇನೆ.ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕ
ದೇವರಹಿಪ್ಪರಗಿ ಕೇಂದ್ರದಿಂದ ಗಡಿ ಗ್ರಾಮಗಳು ಸುಮಾರು 60 ಕಿ.ಮೀ ದೂರ ಇವೆ. ಯಾವುದೇ ಬೆಂಕಿ ಅನಾಹುತ ಸಂಭವಿಸಿದರೆ ವಾಹನ ಬರುವುದರೊಳಗಾಗಿ ಎಲ್ಲವೂ ನಾಶವಾಗುತ್ತದೆ. ಅದಕ್ಕಾಗಿ ಅಗ್ನಿಶಾಮಕ ಕೇಂದ್ರವನ್ನು ಸರ್ಕಾರ ಮಂಜೂರು ಮಾಡಬೇಕು. ಈ ಭಾಗದಲ್ಲಿ ಸುಮಾರು ಸಾವಿರಾರು ಹೆಕ್ಟೇರ್ನಲ್ಲಿ ರೈತರ ಕಬ್ಬು ಬೆಳೆಯುತ್ತಾರೆ. ಅದಕ್ಕಾಗಿ ಸರ್ಕಾರ ಅಗ್ನಿಶಾಮಕ ಕೇಂದ್ರ ಮಂಜೂರು ಮಾಡಬೇಕು.ಕಾಸಪ್ಪ ಜಮಾದಾರ. ಪಪಂ ಸದಸ್ಯ ದೇವರಹಿಪ್ಪರಗಿ