ಸಾರಾಂಶ
- ಆ ಹುಚ್ಚನ ಮಾತು ಏಕೆ ಕೇಳುತ್ತೀರಿ ಎನ್ನುತ್ತಲೇ ಹೊರಟ ಮಾಜಿ ಸಚಿವ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ವಿಜಯಾನಂದ ಕಾಶೆಪ್ಪನವರ ಯಾರ ಬಗ್ಗೆ ತಾನೇ ಚೆನ್ನಾಗಿ ಮಾತನಾಡಿದ್ದಾರೆ. ಅವರೊಬ್ಬ ಹುಚ್ಚ. ಅವರ ಮಾತು ಕೇಳಿದರೆ ಆತನ ಸ್ವಭಾವ ಹೆಂಗಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತದೆ. ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕೂಡಲ ಸಂಗಮ ಪೀಠದಿಂದ ಉಚ್ಚಾಟನೆ ಮಾಡಲು ವಿಜಯಾನಂದ ಕಾಶೆಪ್ಪನವರ್ ನಂತಹ ನೂರು ಜನ ಬಂದರೂ ಆಗುವುದಿಲ್ಲ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಗುಟುರು ಹಾಕಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಉತ್ತರ ಕರ್ನಾಟಕದವನು. ನನ್ನ ಹತ್ರಾನೂ ಬೈಗುಳ ಇದಾವೆ. ಅಂತ ಶಬ್ಧ ನನ್ನ ಬಾಯಿಂದ ಬರೋದಿಲ್ಲ. ಆ ಸಂಸ್ಕೃತಿಯೂ ನಮ್ಮದಲ್ಲ. ನನ್ನ ತಂದೆ- ತಾಯಿ ಅಂತಹ ಸಂಸ್ಕೃತಿ ಕಲಿಸಿಲ್ಲ. ಸಂಸ್ಕೃತಿ, ಸಂಸ್ಕಾರ ಮನುಷ್ಯನಲ್ಲಿರಬೇಕು ಎನ್ನುವುದರೊಂದಿಗೆ ಹುನಗುಂದ ಕಾಂಗ್ರೆಸ್ ಶಾಸಕರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ, ಕೂಡಲ ಸಂಗಮ ಪಂಚಮಸಾಲಿ ಪೀಠಾಧಿಪತಿ ವಿಚಾರ ತಾರಕ್ಕೇರುವ ಸೂಚನೆ ನೀಡಿದರು.
ಬಿಜೆಪಿ ಸರ್ಕಾರವಿದ್ದಾಗಲೂ ನಾವು ಒಂದೇ ವೇದಿಕೆಯಲ್ಲಿದ್ದೆವು. ಆದರೆ, ಈಗ ಅವರು ಶಾಸಕನಾದ ನಂತರ ಒಮ್ಮೆಯಾದರೂ 2ಎ ಮೀಸಲಾತಿ ಕೊಡಿಸುತ್ತೇನೆಂದು ಹೇಳಿದ್ದಾರಾ? ಆಗ ಜಾತಿ ಬೇಕಾಗಿತ್ತು. ಎಂಎಲ್ಎ ಆದಾಗಿನಿಂದ ಯಾರನ್ನೋ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ದೂರಿದರು.2ಎ ಮೀಸಲಾತಿ ಹೋರಾಟದಲ್ಲಿ ಅವರ ಪಾತ್ರ ಏನಿದೆ? ಪಂಚಮಸಾಲಿಗಳ ಸಾಮೂಹಿಕ ಪ್ರಯತ್ನದಿಂದ ಯಶಸ್ಸಾಗಿದೆ. ಅವರ ಪಾತ್ರ ಏನೂ ಇಲ್ಲ. ಯಾರಾದರೂ ಕಾಸು ಕೊಟ್ಟಿದ್ದರೆ ಅದನ್ನೂ ಕಿಸೆಯಲ್ಲಿ ಹಾಕಿಕೊಂಡಿದ್ದಾರೆ. ಇಂತಹವರಿಗೆ 2028ರಲ್ಲಿ ಬುದ್ಧಿ ಕಲಿಸಲು ಜನರಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ಕಳಿಸುತ್ತಾರೆ. ಅವರ ಕ್ಷೇತ್ರದಲ್ಲಿ ಅವರಿಗೆ ಬುದ್ಧಿ ಕಲಿಸುತ್ತಾರೆ. ಆ ಹುಚ್ಚನ ಮಾತು ಏಕೆ ಕೇಳುತ್ತೀರಿ ಎನ್ನುತ್ತಲೇ ಮಾಜಿ ಸಚಿವ ಸಿ.ಸಿ.ಪಾಟೀಲ ಹೊರಟರು.
- - -(ಸಿ.ಸಿ.ಪಾಟೀಲ)