ಪ್ರಸ್ತುತ ದಿನಗಳಲ್ಲಿ ಸಂವಿಧಾನ ನಾಶಕ್ಕಾಗಿ ಮೂಲಬೇರುಗಳನ್ನು ಒಂದೊಂದಾಗಿ ಕತ್ತರಿಸಲಾಗುತ್ತಿದೆ. ಇದಕ್ಕೆ ಕೆಲ ಸಮುದಾಯಗಳು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಕಾರಣ. ದೇಶದಲ್ಲಿ ಸಂವಿಧಾನ ಜಾರಿಯಲ್ಲಿದ್ದರೂ ಮನುಸ್ಮೃತಿಯ ಆಡಳಿತ ವ್ಯವಸ್ಥೆ ತೊಲಗಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದಲ್ಲಿ ಸಂವಿಧಾನ ಜಾರಿಯಾಗಿ 77 ವರ್ಷ ಕಳೆದರೂ ಇಂದಿಗೂ ಶೇ.43ರಷ್ಟು ಕಡು ಬಡವರಿದ್ದಾರೆ ಎಂದು ರಾಜ್ಯ ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ ಕಳವಳ ವ್ಯಕ್ತಪಡಿಸಿದರು.ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಸಂವಿಧಾನ ಸೇನೆ(ಕೆಎಸ್ಎಸ್) ಆಯೋಜಿಸಿದ್ದ ಸಂವಿಧಾನ ಜಾರಿ ದಿನ ಪ್ರಯುಕ್ತ ಭಾರತದ 76ನೇ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂವಿಧಾನ ನಾಶಕ್ಕಾಗಿ ಮೂಲಬೇರುಗಳನ್ನು ಒಂದೊಂದಾಗಿ ಕತ್ತರಿಸಲಾಗುತ್ತಿದೆ. ಇದಕ್ಕೆ ಕೆಲ ಸಮುದಾಯಗಳು ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಕಾರಣ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿಎಸ್ಟಿ ಸಮುದಾಯ ಅಭಿವೃದ್ಧಿಗಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಿದೆ. 2014 ರಿಂದ ಇಲ್ಲಿಯವರೆಗೆ ಎಸ್ಸಿಎಸ್ಪಿಯಲ್ಲಿ 2 ಲಕ್ಷದ 3 ಸಾವಿರ ಕೋಟಿ ರು.ಖರ್ಚಾಗಿದೆ, ಟಿಎಸ್ಪಿಯಲ್ಲಿ 79 ಸಾವಿರ ಕೋಟಿ ರು.ಖರ್ಚಾಗಿದೆ, ಒಟ್ಟು 2 ಲಕ್ಷ 80 ಸಾವಿರ ಕೋಟಿ ರು. ಖರ್ಚಾಗಿದ್ದರೂ ಕೆಳಸ್ತರದ ಸಮುದಾಯದ ಎಲ್ಲಿ ಹೇಗಿದ್ದಾರೋ ಹಾಗೇಯೇ ಇದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಮೈಸೂರಿನ ಉರಿಲಿಂಗಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ, ದೇಶದಲ್ಲಿ ಸಂವಿಧಾನ ಜಾರಿಯಲ್ಲಿದ್ದರೂ ಮನುಸ್ಮೃತಿಯ ಆಡಳಿತ ವ್ಯವಸ್ಥೆ ತೊಲಗಿಲ್ಲ. ಸಂವಿಧಾನವನ್ನೇ ಸುಟ್ಟ, ಒಪ್ಪದ ಜನತೆ-ಸಂಘವಿದೆ ಎಂದು ಎಚ್ಚರಿಸಿದರು.
ಕರ್ನಾಟಕ ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು. ಕೃತಿ ಲೋಕಾರ್ಪಣೆಗೊಂಡಿತು. ಸಾಧಕರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಡಿವೈಎಸ್ಪಿ ಗಂಗಾಧರ್, ದ್ರಾವಿಡ ಕನ್ನಡ ಚಳವಳಿಯ ಮುಖಂಡ ಅಭಿ ಒಕ್ಕಲಿಗ, ಬಿಎಸ್ಪಿ ಹಿರಿಯ ಮುಖಂಡ ಎಸ್.ಸಿದ್ದಯ್ಯ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಕೆಎಸ್ಎಸ್ ಜಿಲ್ಲಾಧ್ಯಕ್ಷ ಕುಮಾರ್ ಗಂಗವಾಡಿ, ಟಿ.ಡಿ.ನಾಗರಾಜು, ಪ್ರದೀಪ್ ಮತ್ತಿತರರಿದ್ದರು.