ಸಾರಾಂಶ
ಹಳಿಯಾಳದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಶಾಸಕ ಆರ್.ವಿ. ದೇಶಪಾಂಡೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಪರಿಚಯ ಇರಬೇಕು ಎಂದರು.
ಹಳಿಯಾಳ: ಸಂವಿಧಾನ ರಚನೆಯಾಗಿ 75 ವರ್ಷಗಳಾಗುತ್ತಾ ಬಂದರೂ ಇನ್ನೂವರೆಗೂ ನಮ್ಮ ದೇಶವಾಸಿಗಳಿಗೆ ಸಂವಿಧಾನದ ಪೂರ್ಣ ಪರಿಚಯ ಪೂರ್ಣ ಜ್ಞಾನ ಇಲ್ಲದಿರುವುದೂ ದುರದೃಷ್ಟಕರವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಖೇದ ವ್ಯಕ್ತಪಡಿಸಿದರು.
ಭಾನುವಾರ ತಾಲೂಕ ಆಡಳಿತ ಸೌಧದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಪರಿಚಯ ಇರಬೇಕು. ಸಂವಿಧಾನ ನಮಗೆ ಕಲ್ಪಿಸಿರುವ ಹಕ್ಕು, ಜವಾಬ್ದಾರಿಗಳ ಜತೆಯಲ್ಲಿ ಕರ್ತವ್ಯಗಳ ಮಹತ್ವ ಅರಿವು ಆಗಬೇಕು. ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿರುವ ನಿರಕ್ಷರತೆ ಹೋಗದ ಹೊರತು ಸಂವಿಧಾನದ ಪರಿಚಯ ಅದರ ಮಹತ್ವದ ಅರಿವು ಆಗುವುದು ಕಷ್ಟಕರ ಎಂದರು. ಪ್ರತಿಬಾರಿಯೂ ನಾವು ನಮ್ಮ ಹಕ್ಕುಗಳಿಗೆ ಒತ್ತು ನೀಡುತ್ತೇವೆ, ಧ್ವನಿಯೆತ್ತುತ್ತೇವೆಯೇ ಹೊರತು ನಮ್ಮ ಜವಾಬ್ದಾರಿ, ಹಕ್ಕುಗಳತ್ತ ಗಮನಹರಿಸಲು ನಿಭಾಯಿಸಲು ಮುಂದಾಗುತ್ತಿಲ್ಲ ಎಂದರು.ರಾಷ್ಟ್ರೀಯ ಕಾರ್ಯಕ್ರಮಗಳು, ರಾಷ್ಟ್ರೀಯ ಸಂಪನ್ಮೂಲಗಳು, ಪರಿಸರದ ನಮಗೆ ಗೌರವ ಅಭಿಮಾನವಿರಬೇಕು ಎಂದರು. ರಾಜ್ಯ ಸರ್ಕಾರ ಸಂವಿಧಾನದ ಮಹತ್ವವನ್ನು ಸಾರಲು ನಮ್ಮ ಹಕ್ಕು-ಜವಾಬ್ದಾರಿಗಳು ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೈಗೊಂಡಿರುವ ಈ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರದಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಮೌನೇಶ ಬಾರಿಕರ ಸಂವಿಧಾನದ ಸಂಕ್ಷಿಪ್ತ ಪರಿಚಯ ನೀಡಿ, ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ, ತಾಪಂ ಇಒ ಪರಶುರಾಜಮ ಘಸ್ತೆ, ಸಿಡಿಪಿಒ ಡಾ. ವಿಜಯಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಪವಾರ ಹಾಗೂ ಜನಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.