ಅಂಬೇಡ್ಕರ್‌ ಆಶಯದಂತೆ ದಲಿತರೆಲ್ಲರೂ ವಿದ್ಯಾವಂತರಾಗಿ ತಮ್ಮ ಹಳ್ಳಿಗಳಿಗೆ ಹಿಂದಿರುಗಿ ತಮ್ಮವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ತಮಿಳು, ಮಲಯಾಳಂಗಳಲ್ಲಿ ಇಂತಹ ಪ್ರಯೋಗಗಳು ನಡೆದು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದಿವೆ. ಇಂತಹ ಪ್ರಯತ್ನಗಳು ಕನ್ನಡ ಚಲನಚಿತ್ರ ರಂಗದಲ್ಲೂ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಿ.ಆರ್‌. ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ದಲಿತನೂ ಶಿಕ್ಷತನಾಗಿ ಉನ್ನತ ಜೀವನ ರೂಪಿಸಿಕೊಳ್ಳಬೇಕು ಎಂದು ಚಿಂತಕ ಪ್ರಸನ್ನಕುಮಾರ್‌ ಕೆರಗೋಡು ಕಿವಿಮಾತು ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಇಂದಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತವಿರುವ ದೃಶ್ಯ ಮಾಧ್ಯಮಗಳ ಮೂಲಕ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡಂತಹ ಚಿತ್ರಗಳು ಮತ್ತು ಸರಣಿಗಳನ್ನು ಹೊರ ತರುವುದರಿಂದ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದರು.

ಅಂಬೇಡ್ಕರ್‌ ಆಶಯದಂತೆ ದಲಿತರೆಲ್ಲರೂ ವಿದ್ಯಾವಂತರಾಗಿ ತಮ್ಮ ಹಳ್ಳಿಗಳಿಗೆ ಹಿಂದಿರುಗಿ ತಮ್ಮವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ತಮಿಳು, ಮಲಯಾಳಂಗಳಲ್ಲಿ ಇಂತಹ ಪ್ರಯೋಗಗಳು ನಡೆದು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದಿವೆ. ಇಂತಹ ಪ್ರಯತ್ನಗಳು ಕನ್ನಡ ಚಲನಚಿತ್ರ ರಂಗದಲ್ಲೂ ಆಗಬೇಕು ಎಂದು ಅವರು ಆಗ್ರಹಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಜ್ಞಾನ, ಪ್ರೌಢಿಮೆ ಹರಿಸಿದವರು. ಅವರಿಗೆ ಸಂಬಂಧಪಟ್ಟ ವಿಷಯವನ್ನು ಹಂತ ಹಂತವಾಗಿ ಪಠ್ಯದಿಂದ ತೆಗೆಯುವ ಮೂಲಕ ಹೊಸ ತಲೆಮಾರಿನ ವಿದ್ಯಾರ್ಥಿಗಳಿಂದ ದೂರಾಗಿಸುವ ಪ್ರಯತ್ನ ನಡೆಯುತ್ತಿವೆ ಎಂದು ಅವರು ಎಚ್ಚರಿಸಿದರು.

ಜ್ಞಾನದ ಪ್ರತಿರೂಪವಾಗಿ ಜಗತ್ತಿನಲ್ಲಿ ಮನ್ನಣೆ ಪಡೆಯುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಹಂತ ಹಂತವಾಗಿ ಪಠ್ಯಕ್ರಮಗಳಿಂದ ಹೊರಗಿಡುವ ಕೆಲಸ ಆಗುತ್ತಿದೆ ಎಂದರು.

ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು. 1952ರಲ್ಲಿ ಡಾ. ರಾಜಕುಮಾರ್ ಅವರ ಭಕ್ತ ಚೇತ ಎಂಬ ಸಿನಿಮಾ ನಿರ್ದೇಶನ ಮಾಡಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದರು. ನಾನು ಕೃಷ್ಣ ನೀ ಬೇಗನೆ ಬಾರೋ, ಭೂಮಿ ತಾಯಿಯ ಚೊಚ್ಚಲ ಮಗ ಮುಂತಾದ ದಲಿತ ಮತ್ತು ಅಸ್ಪೃಶ್ಯತೆ ಕುರಿತ ಸಿನಿಮಾಗಳ ನಿರ್ದೇಶಿಸಿದ್ದೇನೆ ಎಂದು ಅವರು ಸ್ಮರಿಸಿದರು.

10 ಗಂಟೆಗಳ ಸಂವಿಧಾನಕ್ಕೆ ಸಂಬಂಧಪಟ್ಟ ಸಂಚಿಕೆ ಸಿದ್ಧಪಡಿಸಿದ್ದೇನೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಗಮನಕ್ಕೂ ತಂದಿದ್ದೇನೆ. ಆದರೆ, ಇದನ್ನು ಶಾಲಾ-ಕಾಲೇಜುಗಳಲ್ಲಿ ಪ್ರಸಾರ ಮಾಡಲು ಯಾವ ಸರ್ಕಾರಗಳು ಮೇಲಾಗಿ ಅಧಿಕಾರಿಗಳು ಇದಕ್ಕೆ ಬೆಂಬಲ ಹಾಗೂ ಗಮನ ಹರಿಸುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ರಮೇಶ್, ಸಿದ್ದರಾಜು, ಹೆಡತಲೆ ಮಂಜುನಾಥ್, ಎಂ. ಶಿವಪ್ರಸಾದ್, ಗಿರೀಶ್ ಪಿ.ತೊರೆಮಾವು, ಈಶ್ವರ್ ಚಕ್ಕಡಿ, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮೋದಾಮಣಿ, ಸುರೇಶ್ ಪಾಳ್ಯ, ಶಿವಶಂಕರಮೂರ್ತಿ, ಸಿದ್ದಯ್ಯ, ಮಹೇಶ್ ನಾಯಕ್, ಶಾಮ, ಯೋಗೇಶ್, ಎಂ.ಕೆ. ಅಶೋಕ್, ಮುರುಡೇಶ್, ರಾಮು, ಮೋಹನ್, ಸುಶೀಲಾ ಮುಂತಾದವರು ಇದ್ದರು.