ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಪ್ರತಿ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬರು ನಿತ್ಯ ಅಂಬೇಡ್ಕರ್ ಸ್ಮರಿಸಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜು ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಶೂನ್ಯದಿಂದ ಶಿಖರಕ್ಕೆ ಏರಿದ ಮೇರು ವ್ಯಕ್ತಿಯಾಗಿದ್ದಾರೆ. ಕೊಲಂಬಿಯಾ ವಿವಿಯು ಅಂಬೇಡ್ಕರ್ ಅವರ ಶ್ರಮವನ್ನು ಗುರುತಿಸಿ ಸನ್ಮಾನಿಸಿತ್ತು. ದೇಶದಲ್ಲಿ ತುಳಿತಕ್ಕೆ ಅನ್ಯಾಯಕ್ಕೆ ಒಳಗಾದವರಿಗೆ ಸ್ವಾತಂತ್ರ್ಯ ಸಿಗಬೇಕು. ಈ ದೇಶ ಸರಿಯಾಗಿ ನಡೆಯಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.ಇಂಗ್ಲೆಂಡ್ ನಲ್ಲಿ ಆರ್ಥಿಕ ಸಾಮಾಜಿಕ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ಇಂದಿಗೂ ತೀರ್ಪುಗಳನ್ನು ನೀಡುತ್ತಿರುವುದಕ್ಕೆ ಅಂಬೇಡ್ಕರ್ ಸ್ಫೂರ್ತಿ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಪ್ರತಿ ಭಾರತೀಯರಿಗೂ ಮೂಲಭೂತ ಹಕ್ಕು ನೀಡಲಾಗಿದೆ. ಹೀಗಾಗಿ ಪ್ರತಿಯೊಬ್ಬರು ನಿತ್ಯ ಅಂಬೇಡ್ಕರ್ ಸ್ಮರಿಸಬೇಕು ಎಂದರು.
ಧರ್ಮ, ಜಾತಿ, ಭಾಷೆ, ಬುಡಕಟ್ಟು, ಹುಟ್ಟು ಹಾಗೂ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಭಾರತದ ಸಂವಿಧಾನ ಶಿಲ್ಪಿ ಅಲ್ಲ. ಅವರು ಇಡೀ ವಿಶ್ವದ ಸಂವಿಧಾನ ಶಿಲ್ಪಿ. ಕಾನೂನು ವಿಚಾರವನ್ನು ಸಾಕಷ್ಟು ಅರಿತುಕೊಂಡಿದ್ದರು. ತಳ ಸಮುದಾಯದ ನೋವನ್ನು ಸ್ವತಃ ಅನುಭವಿಸಿದ್ದರು. ಹೀಗಾಗಿ ಸಂವಿಧಾನ ರಚನೆಯಿಂದ ಅವರ ಅಪಾರ ಪರಿಶ್ರಮ, ಅಧ್ಯಯನಶೀಲನೆ ಇದೆ ಎಂದರು.ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎಚ್. ವಿಶ್ವನಾಥ್ ಮಾತನಾಡಿ, ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ, ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಬಹಳಷ್ಟು ಶ್ರಮಪಟ್ಟಿದ್ದರು. ಆದರೆ, ಅಂದಿನ ಸಮಾಜವು ಅವರ ಸುಧಾರಣೆಗೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಬೌದ್ಧ ಮತವನ್ನು ಸ್ವೀಕರಿಸಿದರು. ಪರ- ವಿರೋಧಕ್ಕೆ ಹಿಂದೂ ಧರ್ಮ ಅವಕಾಶ ಕಲ್ಪಿಸಿರುವುದರಿಂದಲೇ ಇದು ಸಾಧ್ಯವಾಯಿತು. ಬೇರೆ ಧರ್ಮಗಳಲ್ಲಿ ಅಂತಹ ಅವಕಾಶ ಇಲ್ಲ ಎಂದರು.
ಕರಾಮುವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ್, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮ್ಮಿ, ಅಧ್ಯಯನ ಕೇಂದ್ರ ಡೀನ್ ರಾಮ್ ನಾಥಂ ನಾಯ್ಡು, ಸಂಯೋಜನಾಧಿಕಾರಿ ಡಾ. ಶಿವಕುಮಾರಸ್ವಾಮಿ ಮೊದಲಾದವರು ಇದ್ದರು.