ಸಾರಾಂಶ
ಭಾರತೀನಗರ: ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಸಾಧನೆಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇನ್ನರ್ವಿಲ್ ಸಂಸ್ಥೆ ಅಧ್ಯಕ್ಷೆ ಪುಟ್ಟರತ್ನಮ್ಮ ತಿಳಿಸಿದರು. ಗುಡಿಗೆರೆ ಬೋರೇಗೌಡರ ತೋಟದ ಮನೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಗಂಡು -ಹೆಣ್ಣು ಎಂಬ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು. ಆಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು. ಹೆಣ್ಣು ಮಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಧಾಪುಗಾಲು ಇಡುತ್ತಿದ್ದಾಳೆ. ನಾವು ನಡೆಯುವ ಹಾದಿ ಒಳ್ಳೆಯದಾದರೆ ನಮ್ಮನ್ನು ನೋಡಿ ಇತರರು ಅದೇ ಹಾದಿಯಲ್ಲೇ ಬರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಛಲದಿಂದ ಗುರಿ ಸಾಧಿಸಬೇಕು. ಹೆಣ್ಣು-ಗಂಡಿನಲ್ಲಿ ಸಾಮರಸ್ಯ ಜೀವನ ಇರಬೇಕೇ ಹೊರತು ಮೇಲು- ಕೀಳು ಇರಬಾರದು ಎಂದು ಸಲಹೆ ನೀಡಿದರು. ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಪಂ ಮಾಜಿ ಸದಸ್ಯೆ ಅನುಪಮಾ ಸತೀಶ್ ರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿದ ಗೌರವಾಧ್ಯಕ್ಷೆ ಮಂಜುಳಾ ಬೋರೇಗೌಡ, ಖಜಾಂಚಿ ಜಯಲಕ್ಷ್ಮೀ ವೆಂಕಟೇಗೌಡ, ಮಾಜಿ ಅಧ್ಯಕ್ಷೆ ಜಯಮ್ಮ ಲಕ್ಷ್ಮಣ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಂತರ ಮಹಿಳೆಯರಿಗೆ ಆಯೋಜಿಸಿದ್ದ ಲಕ್ಕಿಡಿಪ್ನಲ್ಲಿ ವಿಜೇತರಾದ ಪವಿತ್ರ, ನಿವೇದಿತಾ, ಲತಾ ಅವರಿಗೆ ಅದೃಷ್ಟ ಮಹಿಳೆಯರೆಂದು ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆ ಕಾರ್ಯದರ್ಶಿ ಧರಣಿ, ನಿರ್ದೇಶಕಿ ಲೀಲಮ್ಮ, ಸೌಭಾಗ್ಯದೇವಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.