ಪ್ರತಿಯೊಬ್ಬರೂ ಅಹಂಕಾರದಿಂದ ಹೊರಬರಬೇಕಿದೆ: ಭವ್ಯಾ ಗೌಡ

| Published : Jul 24 2024, 12:22 AM IST

ಸಾರಾಂಶ

ಕುಶಾಲನಗರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ರಣರಾಗಿಣಿ ಬೆಂಗಳೂರು ಶಾಖೆಯ ಮುಖ್ಯಸ್ಥ ಭವ್ಯಗೌಡ, ಭೂಮಿಯ ಮೇಲೆ ಯಾರೂ ಕೂಡ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ದೋಷಗಳಿರುತ್ತವೆ. ಈ ದೋಷಗಳ ನಿರ್ಮೂಲನಕ್ಕೆ ಗುರುಗಳ ಕೃಪೆ ಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರತಿಯೊಬ್ಬರೂ ತಮ್ಮಲ್ಲಿನ ಗುಣ ದೋಷಗಳು ಹಾಗೂ ಅಹಂಕಾರದಿಂದ ಹೊರಬರುವ ಮೂಲಕ ಉತ್ತಮವಾದ ಗುಣಸ್ವಭಾವಗಳನ್ನು ಬೆಳೆಸಿಕೊಂಡಲ್ಲಿ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ರಣರಾಗಿಣಿ ಬೆಂಗಳೂರು ಶಾಖೆಯ ಮುಖ್ಯಸ್ಥ ಭವ್ಯಗೌಡ ಆಶಿಸಿದ್ದಾರೆ.

ಕುಶಾಲನಗರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಭೂಮಿಯ ಮೇಲೆ ಯಾರೂ ಕೂಡ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ದೋಷಗಳಿರುತ್ತವೆ. ಈ ದೋಷಗಳ ನಿರ್ಮೂಲನಕ್ಕೆ ಗುರುಗಳ ಕೃಪೆ ಬೇಕಿದೆ ಎಂದರು.

ಇಂದು ಬಹಳಷ್ಟು ಮಂದಿ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಹಿಂದೂ ನಾವೆಲ್ಲಾ ಒಂದು ಎಂಬುದನ್ನು ಅರಿಯದೇ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಅನ್ಯ ಧರ್ಮೀಯರ ಅಟ್ಟಹಾಸಕ್ಕೆ ಕಾರಣವಾಗುತ್ತಿದೆ ಎಂದರು.

ಹಿಂದೂ ಯುವಕರು ಬಹಳಷ್ಟು ಮಂದಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದ ಭವ್ಯಗೌಡ, ಮಕ್ಕಳಿಗೆ ಚಿಕ್ಕಂದಿನಿನದಲೇ ಉತ್ತಮ ಸಂಸ್ಕಾರ ಕಲಿಸುವ ಕೆಲಸ ಇನ್ನಾದರೂ ಆಗಬೇಕಿದೆ ಎಂದರು.

ಗೋಣಿಕೊಪ್ಪದ ಉದ್ಯಮಿ ಕೊಲ್ಲಿರ ಧರ್ಮಜ ಮಾತನಾಡಿ, ಹಿಂದೂ ಯುವಕರಿಗೆ ಯಾವುದೇ ಸಿನಿಮಾ ನಟ ಆದರ್ಶವಾಗದೇ ಹಿಂದೂ ಸನಾತನ ಪರಂಪರೆಯ ಶ್ರೇಷ್ಠರಾದ ಶ್ರೀಕೃಷ್ಣ, ಶ್ರೀರಾಮ, ಸೀತಾಮಾತೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಬಸವಣ್ಣ ಮೊದಲಾದವರು ಮಾದರಿಯಾದಾಗ ಮಾತ್ರ ದೇಶ ಭಕ್ತಿ ಪುಟಿದೇಳುತ್ತದೆ. ಸಮಾಜದ ವ್ಯವಸ್ಥೆಯಲ್ಲಿ ಇಂದು ತುಂಬಿ ತುಳುಕಿರುವ ಭ್ರಷ್ಟಾಚಾರ ಹಾಗೂ ಭ್ರಷ್ಟ ಆಡಳಿತದ ವಿರುದ್ಧ ಯುವ ಶಕ್ತಿ ಜಾಗೃತರಾಗಿ ಆರ್ ಟಿ ಐ ಕಾಯಿದೆಯನ್ನು ಬಳಸಿ ನ್ಯಾಯಯುತವಾದ ಹೋರಾಟ ರೂಪಿಸಬೇಕಿದೆ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಜೊತೆ ಇಡೀ ಹಿಂದೂಗಳು ಕೈಜೋಡಿಸುವ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರ ಕಟ್ಟಲು ಮುಂದಾಗಬೇಕೆಂದು ಕರೆಕೊಟ್ಟರು.