ಚುನಾವಣೆ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಕೋಟೂರು

| Published : Mar 20 2024, 01:16 AM IST

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಗೊಳಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಅಕ್ರಮಗಳಿಗೆ ಎಡೆ ಮಾಡಿಕೊಡದೆ ಮತದಾನ ಕಾರ್ಯ ಯಶಸ್ವಿಗೊಳಿಸಲು ಸಹಕಾರ ನೀಡಬೇಕು.

ಮೊಳಕಾಲ್ಮುರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳಿಗೆ ಎಡೆ ಮಾಡಿಕೊಡದೆ ಮತದಾನ ಕಾರ್ಯ ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಸಹಾಯಕ ಚುನಾವಣಾಧಿಕಾರಿ ಬಸನಗೌಡ ಕೋಟೂರು ಹೇಳಿದರು.

ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಗೊಳಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿಕಲ ಚೇತನರಿಗೆ ಸುಗಮ ಸಂಚಾರಕ್ಕೆ ಮಾರ್ಗ ಸೇರಿದಂತೆ ಮತಗಟ್ಟೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಮುಕ್ತ ಮತ್ತು ಪಾರದರ್ಶಕ ಮತದಾನಕ್ಕಾಗಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲಸಮುದ್ರ, ಊಡೆವು, ಎದ್ದಲ ಬೊಮ್ಮನಹಟ್ಟಿ, ಭೀಮಗೊಂಡನಹಳ್ಳಿ ಸೇರಿದಂತೆ ಹಲವು ಕಡೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಪ್ರತಿ ವಾಹನಗಳ ಮೇಲೆ ನಿಗಾವಹಿಸಲಾಗಿದೆ ಎಂದರು.

ಕ್ಷೇತ್ರವ್ಯಾಪ್ತಿಯಲ್ಲಿ 285 ಮತಗಟ್ಟೆಗಳಿದ್ದು, ಪುರುಷ 125058, ಮಹಿಳೆ 124181, ತೃತೀಯ ಲಿಂಗ 13 ಸೇರಿದಂತೆ ಒಟ್ಟು 249252 ಮತದಾರರಿದ್ದಾರೆ. ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯಲು ಫ್ಲೈಯಿಂಗ ಸ್ಕ್ವ್ಯಾಡ್ ಗಳನ್ನು ನೇಮಿಸಲಾಗಿದೆ. ಅಕ್ರಮಗಳು ನಡೆದಲ್ಲಿ ಸಿ.ವಿಜಲ್ ಆ್ಯಪ್ ಮೂಲಕ ತಿಳಿಸಬಹುದು. ಜತೆಗೆ ಕಚೇರಿಯಲ್ಲಿ 08198229234 ಮತ್ತು 1905 ಸಹಾಯ ವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

85 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲ ಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಮತದಾರರಿಗೆ ಗುಪ್ತ ಮತದಾನಕ್ಕೆ ಕ್ರಮವಹಿಸಲಾಗುವುದು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಶೇಕಡವಾರು ಹೆಚ್ಚಳಕ್ಕಾಗಿ ಗ್ರಾಮೀಣ ಭಾಗದಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. ಯುವ ಮತದಾರರು ಮತದಾನ ಕಾರ್ಯದಲ್ಲಿ ಭಾಗಿಯಾಗಲು ಪ್ರೇರೇಪಿಸಲಾಗುವುದು ಎಂದರು.

ರಾಜಕೀಯ ಪಕ್ಷಗಳ ಮುಖಂಡರು ನಡೆಸುವಂತ ಪ್ರಚಾರ ಸಭೆಗಳಿಗೆ ಮೊದಲೆ ಅನುಮತಿ ಪಡೆಯಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರಚಾರ ಸಭೆಗಳನ್ನು ನಡೆಸಬೇಕು. ಪ್ರತಿ ಸಭೆಯ ಖರ್ಚು-ವೆಚ್ಚದ ವಿವಿರ ನೀಡುವ ಮೂಲಕ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಪೂರೈಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಜಿ.ಎಸ್.ಶಂಕ್ರಪ್ಪ, ಸಿಪಿಐ ವಸಂತ ಅಸೋದೆ, ಅಬಕಾರಿ ಸಿಪಿಐ ರಮೇಶ, ಚಳ್ಳಕೆರೆ ಅಭಕಾರಿ ಸಬ್‌ಇನ್ಸ್‌ಪೆಕ್ಟರ್ ರೇಖಾ, ಪಶು ಇಲಾಖೆಯ ಎಡಿ ಡಾ.ರಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಬಿಎಸ್‌ಪಿ ಪಕ್ಷದ ಮಂಜುನಾಥ ಸ್ವಾಮಿ ನಾಯಕ, ಪಟ್ಟಣ ಪಂಚಾಯಿತಿ

ಸದಸ್ಯ ಅಬ್ದುಲ್ಲಾ, ಮುಖಂಡ ಶಿವಲಿಂಗಪ್ಪ ಇದ್ದರು.