ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಮುಖ್ಯ ಎಂದು ಬೆಸ್ಕಾಂ ಇಲಾಖೆಯ ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಬಿದ್ದಿಯಂಡ ನಂದ ಹೇಳಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿರುವ ಕ್ರೀಡಾಕೂಟಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಾಗ ಸಂಘಟನೆ ಬಲವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಸಂಘಟಕರು ಶ್ರಮ ವಹಿಸಿ ಕ್ರೀಡಾಕೂಟವನ್ನು ಆಯೋಜಿಸಿದ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಎಲ್ಲರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಬಿದ್ದಿಯಂಡ-ಪೊನ್ನಟಿಯಂಡ ಮೊದಲ ಪಂದ್ಯವನ್ನು ನಿವೃತ್ತ ಸೈನಿಕ ಪೊಂಗೆರ ಜೀವನ್ ಬೋಪಣ್ಣ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಕ್ರೀಡಾ ಸಮಿತಿ ಅಧ್ಯಕ್ಷ ತೊತ್ತಿಯಂಡ ಅಜಂತ್ ನಾಣಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆರೋಗ್ಯ ಇಲಾಖೆಯ ನಿವೃತ್ತ ಸ್ಟಾಫ್ ನರ್ಸ್ ಪೊನ್ನಕಂಡ ಉಷಾ ಹರೀಶ್ , ಉಪಾಧ್ಯಕ್ಷ ಪೈತಾಡಿಯಂಡ ಧರ್ಮರಾಜ್ ಗಣಪತಿ, ಕಾರ್ಯದರ್ಶಿ ಚೋಕಿರ ವಾಸುದೇವ, ಖಜಾಂಚಿ ಚೋಕಿರ ಬಾಬಿ ಭೀಮಯ್ಯ, ಸಹ ಕಾರ್ಯದರ್ಶಿ ಕೈ ಬ್ಲೀರ ಮೀನಾ ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಕ್ರೀಡಾಕೂಟ ಜರುಗಲಿದೆ. ಪುರುಷರಿಗೆ ಕ್ರಿಕೆಟ್ ಪಂದ್ಯಾಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ ಹಾಗೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆಯಲಿವೆ.ಶನಿವಾರ ನಡೆದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕೊನೆಯದಾಗಿ ಅಯ್ಯಂಗೇರಿ ಗ್ರಾಮದ ಬಿದ್ದಿಯಂಡ ಮತ್ತು ಮಡಿಕೇರಿ ನಾಡು ಅರೆಯಂಡ ತಂಡಗಳು ಫೈನಲ್ ಪ್ರವೇಶಿಸಿದ್ದು, ಭಾನುವಾರ ಎರಡೂ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಫೈನಲ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ, ಉದ್ಯಮಿ ಎಡಿಕೇರಿ ಪ್ರಸನ್ನ, ನಿವೃತ್ತ ಮುಖ್ಯ ಶಿಕ್ಷಕಿಯರಾದ ಪೈತಾಡಿಯಂಡ ಪೊನ್ನಮ್ಮ, ಕೈಬ್ಲೀರ ಪಾರ್ವತಿ ಪಾಲ್ಗೊಳ್ಳಲಿದ್ದಾರೆ.