ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಶಿಕ್ಷಣ ಸುಧಾರಣೆಗೆ ಹೆಚ್ಚು ಮಹತ್ವ ನೀಡಿ ಶಿಕ್ಷಣದ ಫಲಿತಾಂಶದಲ್ಲಿ ಹಿಂದೆ ಇರುವ ಕಿತ್ತೂರು ಕ್ಷೇತ್ರವನ್ನು ಫಲಿತಾಂಶ ಸುಧಾರಣೆಗೆ ಪಣತೊಟ್ಟು ಇವತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಶಿಕ್ಷಣ ಕ್ಷೇತ್ರದ ಎಲ್ಲರ ಪ್ರಯತ್ನದ ಪರಿಣಾಮ ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ಪಟ್ಟಣದ ಕೋಟೆ ಆವರಣದ ಮುಂಭಾಗದಲ್ಲಿ ಶನಿವಾರ ಪಟ್ಟಣ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಆಯೋಜಿಸಿದ 2024-25ನೇ ಸಾಲಿನ ಎಸ್ಎಸ್ಎಲ್ಸಿಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪುರಸ್ಕಾರ ಹಾಗೂ ಗೌರವ ಸನ್ಮಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಡಿನ ದೇಶದ ಸುಧಾರಣೆಗೆ ಶಿಕ್ಷಣದ ಪ್ರಮುಖ ಪಾತ್ರವಿದೆ. ನಾವು ವಿದ್ಯಾವಂತರಾದರೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಸಾಧ್ಯ. ತಂದೆ ತಾಯಿ ಇಟ್ಟ ಕನಸು ಮುಟ್ಟಲು ಸಾಧನೆಯ ಬಾಗಿಲು ತಟ್ಟಿದಾಗ ಸಾರ್ಥಕವಾಗುತ್ತದೆ. ಶಿಕ್ಷಣದಿಂದಲೇ ಮಾತ್ರ ಸಾಧನೆ ಮಾಡಲು ಸಾಧ್ಯ. ಈಗಿನ ಕಾಲದಲ್ಲಿ ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಕೆಲಸ ನಾನು ಸದಾ ಮಾಡುತ್ತೇನೆ. ಎಲ್ಲಾ ಮಕ್ಕಳು ಶ್ರದ್ಧೆಯಿಂದ ಕಲಿತು ಹೆತ್ತ ತಂದೆ ತಾಯಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಮಾತನಾಡಿ, ಕಿತ್ತೂರು ಇದೇ ಪ್ರಥಮ ಬಾರಿ ಶಿಕ್ಷಣ ಕ್ಷೇತ್ರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಆತ್ಮವಿಶ್ವಾಸ ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಇದ್ದರೆ ಸಾಧಿಸಲು ಸಾಧ್ಯ ಇವತ್ತು ನಮ್ಮ ಶಿಕ್ಷಕ ವೃಂದ ಪಟ್ಟ ಪರಿಶ್ರಮದ ಫಲವಾಗಿ ಸಾಧನೆಗೆ ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರದ 52 ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರಾಜಗುರು ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹಾಗೂ ಶ್ರೀ ಗುರು ಮಡಿವಾಳೆಶ್ವರ ನಿಚ್ಚಣಕಿ ಮಠದ ಪಂಚಾಕ್ಷರಿ ಸ್ವಾಮೀಜಿ ಸಾಧನೆ ಮಾಡಿದ ವಿದ್ಯಾರ್ಥಿಗಳ, ಶಿಕ್ಷಕರ ಸಾಧನೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ಪಪಂ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ಬೈಲಹೊಂಗಲದ ಶಿಕ್ಷಣಾಧಿಕಾರಿ ಎ.ಎಂ.ಪ್ಯಾಟಿ, ಕಿತ್ತೂರ ಸಿಪಿಐ ಶಿವಾನಂದ್ ಗುಡಗನಟ್ಟಿ, ಕೆಪಿಸಿಸಿ ಸದಸ್ಯ ರೋಹಿಣಿ ಪಾಟೀಲ್, ತಾಪಂ ಇಒ ಕಿರಣ ಗೋರ್ಪಡೆ, ಪಿಡಬ್ಲ್ಯೂಡಿ ಎಇಇ ಸಂಜೀವ ಮಿರಜಕರ್ ಹಾಗೂ ಪಪಂ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.