ಪರಿಸರ ಕಾಪಾಡಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಿ: ಸಮಾಜ ಸೇವಕಿ ಅಕ್ಕ ಅನು ಕರೆ

| Published : Jun 06 2024, 12:30 AM IST

ಪರಿಸರ ಕಾಪಾಡಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಿ: ಸಮಾಜ ಸೇವಕಿ ಅಕ್ಕ ಅನು ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮಾಜ ಸೇವೆಗೆ ಮುಂದಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕ.

ಕನ್ನಡಪ್ರಭ ವಾರ್ತೆ ಕನಕಪುರ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾಮರಸ್ಯ ಟ್ರಸ್ಟ್‌ ಮತ್ತು ಐಗಿರಿ ಟ್ರಸ್ಟ್‌ ಸಹಯೋಗದಲ್ಲಿ ಕಾಡ್ಗಲ್‌ ರೆಸಾರ್ಟ್‌ ವತಿಯಿಂದ ತಾಲೂಕಿನ ಕಸಬಾ ಹೋಬಳಿ ಗೌಡಹಳ್ಳಿ ಗ್ರಾಮದ ಮುನೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಸಮಾಜ ಸೇವಕಿ ಅಕ್ಕ ಅನು, ಐಗಿರಿ ಟ್ರಸ್ಟ್‌ ಅಧ್ಯಕ್ಷೆ ಮತ್ತು ಮಿಸ್‌ ಇಂಡಿಯಾ ಪುರಸ್ಕೃತೆ ರಿತೀಕ್ಷ ಹಿರೆಮಠ್, ಸಾಮರಸ್ಯ ಟ್ರಸ್ಟ್‌ ಅಧ್ಯಕ್ಷೆ ಲಕ್ಷ್ಮೀಗೌಡ ಪರಿಸರ ಪ್ರೇಮಿ ಮರಸಪ್ಪ ರವಿ, ಕಾಡ್ಗಲ್‌ ರೆಸಾರ್ಟ್‌ ಮಾಲೀಕ ಅರುಣೇಶ್‌ ರವರು ಸಸಿಗಳನ್ನು ನೆಟ್ಟರು.

ಸಮಾಜ ಸೇವಕಿ ಅಕ್ಕ ಅನು ಮಾತನಾಡಿ, ಪರಿಸರಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಆಗ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದರು.

ಸಾಮರಸ್ಯ ಟ್ರಸ್ಟ್‌ ಅಧ್ಯಕ್ಷೆ ಲಕ್ಷ್ಮೀಗೌಡ ಮಾತನಾಡಿ, ಪರಿಸರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರೂ ವರ್ಷದಲ್ಲಿ 10 ಗಿಡ ಬೆಳೆಸಿದರೂ ಪರಿಸರ ನಮ್ಮನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.

ಪರಿಸರ ಪ್ರೇಮಿ ಮರಸಪ್ಪರವಿ ಮಾತನಾಡಿ, ಅಕ್ಕ ಅನುರವರ ಕನ್ನಡ ಶಾಲೆ ಉಳಿಸುವ ಕಾರ್ಯ ಶ್ಲಾಘನೀಯವಾದುದು. ಇದರ ಜೊತೆಗೆ ಅವರ ಪರಿಸರ ಕಾಳಜಿ ನೋಡಿ ಅವರ ಮೇಲೆ ಮತ್ತಷ್ಟು ಗೌರವ ಹೆಚ್ಚಾಯಿತು. ಇದೇ ರೀತಿ ಯುವಕರಿಗೆ ಮಾದರಿಯಾಗಲಿ ಎಂದು ತಿಳಿಸಿದರು.

ಐಗಿರಿ ಟ್ರಸ್ಟ್‌ ಅನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಟ್ರಸ್ಟ್ ಅಧ್ಯಕ್ಷೆ, ಮಿಸ್‌ ಇಂಡಿಯಾ ಪುರಸ್ಕೃತೆ, ರಿತೀಕ್ಷ ಹಿರೆಮಠ್, ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮಾಜ ಸೇವೆಗೆ ಮುಂದಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕ ಎಂದು ಹೇಳಿದರು.

ಕಾಡ್ಗಲ್‌ ರೆಸಾರ್ಟ್ ಮಾಲೀಕ ಅರುಣೇಶ್‌ , ರೇವಯ್ಯ ಹಿರೆಮಠ, ಬಾಲಾಜಿ ವಿಷ್ಣು, ಮಂಜುನಾಥ್‌ ಸಾಲಿಮಠ, ಮಹೇಂದ್ರ ಹಿರೆಮಠ್‌, ಮಹೇಶ್‌ ಗೌಡ, ಸರೋಜಾ ಸಾಲಿಮಠ್, ಲಿಯಾ ಐಗಿರಿ ,ಶೇಖರ್‌ ಗೌಡಹಳ್ಳಿ ಹಾಜರಿದ್ದರು.