ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ನಾವು ದೇಶದ ಪ್ರಜೆಯಾಗಿ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಗೌರವ ಸಲ್ಲಿಸುವ ಮನೋಭಾವ ಬರಬೇಕು. ಇವೆಲ್ಲಕ್ಕೂ ನಮ್ಮಲ್ಲಿ ಸಮಯ ಪ್ರಜ್ಞೆ ಇರಬೇಕು ಎನ್ನುವ ಕನಿಷ್ಠ ಅರಿವು ತಾಲೂಕಿನ ಅಧಿಕಾರಿಗಳಲ್ಲಿ ಇಲ್ಲದೇ ಇರುವುದು ವಿಪರ್ಯಾಸದ ಸಂಗತಿ. ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಇತ್ತು. ಇವತ್ತು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಎಲ್ಲರೂ ಸೇರಿ ಮೊದಲು ದೇಶಾಭಿಮಾನ ಬೆಳಿಸಿಕೊಳ್ಳಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ.ಟಿ.ಪಾಟೀಲ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಪಪಂ ಸಹಯೋಗದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗ್ಗೆ 7.45ಕ್ಕೆ ಸರಿಯಾಗಿ ಪಟ್ಟಣದ ಗ್ರಾಮ ಚಾವಡಿಯಲ್ಲಿ ದ್ವಜಾರೋಹಣವಾಗುವ ಸಂದರ್ಭದಲ್ಲಿ ಕೇವಲ ಇಬ್ಬರು ಹಿರಿಯ ಅಧಿಕಾರಿಗಳು ಇದ್ದರು. ಇನ್ನುಳಿದ ಅಧಿಕಾರಿಗಳು ಬಾರದೆ ಇರುವುದಕ್ಕೆ ಏನು ಮಾತನಾಡಬೇಕು ಎಂದ ಅವರು, ಶಿಕ್ಷಣ ಇಲಾಖೆ, ತಾಪಂ ಅಧಿಕಾರಿಗಳು ಮತ್ತು ಉಳಿದ ಎಲ್ಲ ಇಲಾಖೆಗಳು ಸೇರಿದಂತೆ ಮಾಧ್ಯಮದವರು ಸಮಯಕ್ಕೆ ಸರಿಯಾಗಿ ದ್ವಜಾರೋಹಣಕ್ಕೆ ಬಾರದೇ ಇರುವುದು ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರು ನಮ್ಮಲ್ಲಿ ಸಮಯ ಪ್ರಜ್ಞೆ, ದೇಶಾಭಿಮಾನ ಬೆಳೆಯುತ್ತಿಲ್ಲ ಎಂದರೆ ಏನರ್ಥ ಎಂದು ಶಾಸಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಘಟನೆ ನಡೆಯಿತು.
12ನೇ ಶತಮಾನದಲ್ಲಿ ಬಸವಣ್ಣನವರು ಸರಿಸಮಾನ ಸಮಾಜ ನಿರ್ಮಾಣ ಕಾರ್ಯ ಮಾಡಿದ್ದು, ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ್ಯ ಹೋರಾಟ ಮಾಡಿದ್ದು, ಡಾ.ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದು ಜತೆಗೆ ಸರ್ದಾರ ವಲ್ಲಭಾಯಿ ಪಟೇಲ ಅವರು ಅಂದು ಎಲ್ಲ ರಾಜ್ಯಗಳ ರಾಜ್ಯರುಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ಚೌಕಟ್ಟಿಗೆ ತಂದಿದ್ದರ ಪರಿಣಾಮ ಇಂದು ಸ್ವಾತಂತ್ರ್ಯದಿಂದ ಎಲ್ಲರು ಬದುಕುತ್ತಿದ್ದೇವೆ. ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಇತ್ತು. ಇವತ್ತು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಎಲ್ಲರೂ ಸೇರಿ ಮೊದಲು ದೇಶಾಭಿಮಾನ ಬೆಳಿಸಿಕೊಳ್ಳಬೇಕು. ಮಕ್ಕಳಲ್ಲಿಯೂ ದೇಶಾಭಿಮಾನ ಕಲಿಸುವ ಕೆಲಸವಾಗಬೇಕು. ಮೇಲು ಕೀಳು ಎನ್ನುವ ಬಾವನೆ ಎಲ್ಲರಲ್ಲಿಯೂ ಹೋಗಬೇಕು ನಾವೆಲ್ಲರು ಒಂದೇ ಎನ್ನುವ ಭಾವನೆ ಬಂದಾಗ ರಾಜ್ಯ, ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.ಕ್ಷೇಮೆ ಕೇಳಿದ ತಹಸೀಲ್ದಾರ್, ಬಿಇಓ:
ತಾಲೂಕು ಆಡಳಿತ ಸರಿಯಾದ ಮಾರ್ಗ ಅನುಸರಿಸಿಲ್ಲ. ಶಿಕ್ಷಣ ಇಲಾಖೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ದ್ವಜಾರೋಹಣಕ್ಕೆ ಕರೆದುಕೊಂಡು ಬಂದಿಲ್ಲ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸಿಲ್ಲ ಎಂದು ಶಾಸಕರು ತರಾಟೆಗೆ ತಗೆದುಕೊಂಡ ನಂತರ ತಹಸೀಲ್ದಾರ್ ವಿನೋದ ಹತ್ತಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪೂರ ಅವರು ಕ್ಷೇಮೆ ಕೇಳಿ ಇನ್ನು ಮುಂದೆ ಹೀಗೆ ಆಗದಂತೆ ನಿಗಾವಹಿಸಲಾಗುವುದು ಎಂದು ಇಬ್ಬರು ಅಧಿಕಾರಿಗಳು ವೇದಿಕೆ ಮೇಲೆ ಮಾತನಾಡುತ್ತ ತಿಳಿಸಿದರು.ಸಮಾರಂಭದಲ್ಲಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು. ಬಿಇಒ ಆರ್.ಎಸ್.ಆದಾಪೂರ ಸ್ವಾಗತಿಸಿದರು. ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ತಾಪಂ ಇಒ ಅಭಯಕುಮಾರ ಮೊರಬ ಇದ್ದರು. ಶಾಸಕರು ತಡವಾಗಿ ಬಂದ ಅಧಿಕಾರಿಗಳನ್ನು ವೇದಿಕೆ ಮೇಲೆ ಬಾರದಂತೆ ಸೂಚಿಸಿದರು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಶಾಸಕರು ತಿಳಿಸಿದರು.